ಭುವನೇಶ್ವರ್: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಬಳಿ ಮೂರು ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 238ಕ್ಕೆ ಏರಿದೆ. 900 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ.
ಈ ಕುರಿತು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೇನಾ ಮಾಹಿತಿ ನೀಡಿ, ‘ತ್ವರಿತವಾಗಿ ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ’ ಎಂದಿದ್ದಾರೆ.
ಶುಕ್ರವಾರ ಸಂಜೆ 7.20 ರ ಸುಮಾರು ಈ ದುರ್ಘಟನೆ ನಡೆದಿದೆ. ರೈಲು ದುರಂತದ ಬಗ್ಗೆ ಪ್ರಧಾನಿ ಮೋದಿ ಅವರು ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಕೆಲ ಮೂಲಗಳ ಪ್ರಕಾರ ಸಾವಿನ ಸಂಖ್ಯೆ 300ರ ಸನಿಹ ಹೋಗಿದ್ದು ಅಧಿಕೃತವಾಗಿ ಘೋಷಣೆ ಆಗಿಲ್ಲ. ಇದು ಒಡಿಶಾದಲ್ಲಿ ಅತಿದೊಡ್ಡ ರೈಲು ದುರಂತ ಎನ್ನಲಾಗಿದೆ.
‘ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು. ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಕೈಗೊಳ್ಳಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.