ಕೋಲ್ಕತ್ತ (ಪಿಟಿಐ): ‘...ಚದುರಿದ ಮೋಡಗಳು ಸಣ್ಣ ಸಣ್ಣ ಮಳೆ ತರಿಸುತ್ತವೆ, ನಾವು ಕೇಳಿದ ಸಣ್ಣ ಸಣ್ಣ ಕಥೆಗಳು ಪ್ರೀತಿ ಅರಳಿಸುತ್ತವೆ...’ ‘...ಪ್ರೀತಿಯೇ ಎಲ್ಲಾ ಗಳಿಗೆಯಲ್ಲೂ ನೀನು ಇರಬೇಕು, ಎಲ್ಲಾ ಗಳಿಗೆಯಲ್ಲೂ ನೀನು ನನ್ನ ಮನದಲ್ಲಿರುತ್ತೀಯೇ...’
– ಈ ಬಂಗಾಳಿ ಕವಿತೆಗಳ ಸಾಲುಗಳು ರೈಲು ಕಂಬಿಗಳ ಮೇಲೆ ಅನಾಥವಾಗಿ ಬಿದ್ದಿದ್ದವು. ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ರಚಿಸಿದ ಕವಿತೆಗಳಿವು. ಪ್ರಯಾಣದುದ್ದಕ್ಕೂ ಪ್ರಯಾಣಿಕನ ಕವಿ ಭಾವನೆಗಳು ಹಾಳೆಗಳ ಮೇಲೆ ಪದಗಳ ರೂಪ ಪಡೆದುಕೊಂಡಿದ್ದವು.
'ಪ್ರಯಾಣಿಕನ ಡೈರಿಯೊಂದರ ಹಾಳೆಗಳು ಕಂಬಿಯ ಮೇಲೆ ಬಿದ್ದಿದ್ದವು. ಇದರಲ್ಲಿ ಆನೆ, ಮೀನುಗಳ ಚಿತ್ರಗಳನ್ನೂ ಬಿಡಿಸಲಾಗಿತ್ತು. ಈ ವರೆಗೂ ಈ ಕವಿತೆಗಳನ್ನು ರಚಿಸಿದವರ ಸಂಬಂಧಿಕರು ನಮ್ಮ ಬಳಿ ಬಂದಿಲ್ಲ. ಈ ಕವಿತೆಗಳನ್ನು ಯಾರು ಬರೆದಿದ್ದಾರೆ ಎಂದೂ ತಿಳಿದಿಲ್ಲ’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಕವಿತೆಗಳಿದ್ದ ಹಾಳೆಗಳು ಕಂಬಿಯ ಮೇಲೆ ಬಿದ್ದಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಬದುಕು ಎಷ್ಟು ಕ್ಷಣಿಕ’ ಎಂಬಂಥ ಕಮೆಂಟ್ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.