ಅಯೋಧ್ಯೆ: ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ಪ್ರಾರಂಭವಾಗಿದೆ. ಜ.22ರಂದು ನಡೆಯುವ ಸಮಾರಂಭಕ್ಕೆ ಆಗಮಿಸುವಂತೆ ಗಣ್ಯರಿಗೆ ಆಹ್ವಾನವನ್ನೂ ನೀಡಲಾಗುತ್ತಿದೆ.
ರಾಮಮಂದಿರಕ್ಕೆ ದೇಶದ ಹಲವಾರು ಕಡೆಯಿಂದ ವಿವಿಧ ಬಗೆಯ ಉಡುಗೊರೆಗಳು ಬಂದಿವೆ. 2,100 ಕೆ.ಜಿ ತೂಕದ ಗಂಟೆ, ಸೀತಾ ಮಾತೆಯ ಊರಾದ ನೇಪಾಳದಿಂದ ಸುಮಾರು 3,000 ಕ್ಕೂ ಹೆಚ್ಚು ಉಡುಗೊರೆ, ರಾಮಮಂದಿರ ಪರಿಕಲ್ಪನೆಯಲ್ಲಿ ಅರಳಿದ ವಜ್ರದ ಸರ ಹೀಗೆ ಹಲವು ಬಗೆಯ ಉಡುಗೊರೆಗಳನ್ನು ಕಾಣಬಹುದಾಗಿದೆ.
ಈ ನಡುವೆಯೇ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿರುವ ಆಗ್ರಾ ಪೇಠಾ(ಬೂದು ಕುಂಬಳಕಾಯಿಯಿಂದ ಮಾಡುವ ವಿಶೇಷ ತಿನಿಸು) ಇಂದು ಅಯೋಧ್ಯೆ ತಲುಪಿದೆ. ಆಗ್ರಾದಿಂದ ಅಯೋಧ್ಯೆಗೆ ಸುಮಾರು 56 ಬಗೆಯ ಪೇಠಾವನ್ನು ಕಳುಹಿಸಿಕೊಡಲಾಗಿದೆ.
108 ಅಡಿ ಉದ್ದದ ಅಗರಬತ್ತಿಗೆ ಅಗ್ನಿ ಸ್ಪರ್ಶ
ಗುಜರಾತ್ನಿಂದ ತಂದ 108 ಅಡಿ ಉದ್ದದ ಅಗರಬತ್ತಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಹೊತ್ತಿಸಲಾಯಿತು. ಈ ವೇಳೆ ಹಲವು ರಾಮ ಭಕ್ತರು ಹಾಜರಿದ್ದರು.