ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ ಆತ್ಮನಿರ್ಭರದ ಪ್ರತೀಕ: ಟ್ರಸ್ಟ್‌ ಬಣ್ಣನೆ

Published 26 ಡಿಸೆಂಬರ್ 2023, 16:31 IST
Last Updated 26 ಡಿಸೆಂಬರ್ 2023, 16:31 IST
ಅಕ್ಷರ ಗಾತ್ರ

ಅಯೋಧ್ಯೆ: ‘ರಾಮಮಂದಿರ ನಿರ್ಮಾಣ ಇದುವರೆಗೂ ಪೂರ್ಣಗೊಂಡಿಲ್ಲ. ಆದರೆ, ಪೂರ್ಣಗೊಂಡ ಮಂದಿರದಲ್ಲಿ ಅದರದ್ದೇ ಆದ ಕೊಳಚೆ ನೀರು ಸಂಸ್ಕರಣಾ ಘಟಕ ಹಾಗೂ ನೀರು ಶುದ್ಧೀಕರಣ ಘಟಕ ಇರಲಿದೆ. ಜೊತೆಗೆ ಇಡೀ ದೇವಾಲಯಕ್ಕೆ ಪವರ್‌ಹೌಸ್‌ನಿಂದ ನೇರವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆ ಮೂಲಕ ಮಂದಿರವು ಸಂಪೂರ್ಣ ಆತ್ಮನಿರ್ಭರವಾಗಿದೆ’ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದರು.

ಮಂದಿರ ಸಂಕೀರ್ಣದಲ್ಲಿ ಮಾಧ್ಯಮದವರಿಗಾಗಿ ಚಂಪತ್‌ ರಾಯ್‌ ಅವರು ಮಂಗಳವಾರ ಪ್ರಾತ್ಯಕ್ಷಿಕೆ ನೀಡಿದರು. ‘ದೇವಸ್ಥಾನ ಪ್ರದೇಶವು ಒಟ್ಟು 70 ಎಕರೆ ವಿಸ್ತಾರದಲ್ಲಿ ಇರಲಿದೆ. ಇದರ ಶೇ 70ರಷ್ಟು ಜಾಗವು ಹಸಿರಿನಿಂದ ಕಂಗೊಳಿಸಲಿದೆ. ಜೊತೆಗೆ, ದೇವಾಲಯ ಪ್ರದೇಶದಲ್ಲಿ ಅಗ್ನಿಶಾಮಕ ಘಟಕ ಇರಲಿದೆ. ಈ ಘಟಕಕ್ಕೆ ತನ್ನದೇ ಆದ ಸ್ವಂತ ನೀರಿನ ತೊಟ್ಟಿ ಇರಲಿದೆ’ ಎಂದು ವಿವರಿಸಿದರು.

‘ದೇವಾಲಯವು ಪೂರ್ವಾಭಿಮುಖವಾಗಿ ಇರಲಿದೆ ಹಾಗೂ ದಕ್ಷಿಣ ದಿಕ್ಕಿನಿಂದ ನಿರ್ಗಮನ ವ್ಯವಸ್ಥೆ ಇರಲಿದೆ. ನೆಲಮಹಡಿಯೂ ಸೇರಿ ಮಂದಿರವು ಮೂರು ಅಂತಸ್ತಿನ ದಾಗಿರುತ್ತದೆ. ಮಂದಿರವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ದೇವಾಲಯಗಳಲ್ಲಿ ಇರುವ ‘ಜಗುಲಿ’ಯನ್ನು ರಾಮಮಂದಿರದಲ್ಲೂ ಅಳವಡಿಸಲಾಗಿದೆ’ ಎಂದು ವಿವರಿಸಿದರು.

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ

–ಪಿಟಿಐ ಚಿತ್ರ

ಯಚೂರಿ ಭಾಗವಹಿಸುವುದಿಲ್ಲ: ಸಿಪಿಎಂ

ನವದೆಹಲಿ: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರು ಭಾಗವಹಿಸುವು‌ದಿಲ್ಲ ಎಂದು ಸಿಪಿಎಂನ ಪಾಲಿಟ್‌ ಬ್ಯುರೊ ಮಂಗಳವಾರ ಹೇಳಿದೆ. ‘ಧಾರ್ಮಿಕ ಕಾರ್ಯಕ್ರಮವಾದ ರಾಮ ಮಂದಿರ ಉದ್ಘಾಟನೆಯನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ’ ಎಂದೂ ಪಕ್ಷ ದೂರಿದೆ. ಪಕ್ಷದ ನಿರ್ಧಾರದ ಕುರಿತು ಪಾಲಿಟ್‌ ಬ್ಯೂರೊ ತನ್ನ ‘ಎಕ್ಸ್‌’ ಖಾತೆಯಲ್ಲಿ ಹೇಳಿಕೆ ಪ್ರಕಟಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಹಾಗೂ ಸರ್ಕಾರದ ಇನ್ನಿತರ ವಿಭಾಗಗಳನ್ನು ಬಳಸಿಕೊಂಡು ಧಾರ್ಮಿಕ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸೇರಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನಾಗಿ ಮಾರ್ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ಸರ್ಕಾರವೊಂದಕ್ಕೆ ಯಾವುದೇ ಧಾರ್ಮಿಕ ಬಾಂಧವ್ಯ ಇರಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ ಇದನ್ನು ಉಲ್ಲಂಘಿಸಿದೆ’ ಎಂದಿದೆ. ಕಾಂಗ್ರೆಸ್‌ ನಿರ್ಧಾರ ರಹಸ್ಯ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್‌ರಂಜನ್‌ ಚೌಧರಿ ಅವರಿಗೆ ಆಮಂತ್ರಣ ನೀಡಲಾಗಿದೆ. ಆದರೆ ಇವರಲ್ಲಿ ಯಾರು ಕಾರ್ಯಕ್ರಮಕ್ಕೆ ಹೋಗುತ್ತಾರೆ ಪಕ್ಷದ ನಿರ್ಧಾರ ಏನು ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಜನವರಿ 22ರಂದೇ ಎಲ್ಲರಿಗೂ ತಿಳಿಯಲಿದೆ ಎಂದು ಕಾಂಗ್ರೆಸ್‌ ಹೇಳಿದೆ. ಕೋಟ್‌ ದೇಶವು ರಾಮ ರಾಮತ್ವಕ್ಕೆ ಮರಳುತ್ತಿದೆ. ಎಷ್ಟು ದಿನಗಳವರೆಗೆ ಇದನ್ನು ವಿರೋಧಿಸುವಿರಿ. ರಾಮ ರಾಮತ್ವ ಹಾಗೂ ಭಾರತಕ್ಕೆ ಮರಳಿ ಬನ್ನಿ. ನಿಮ್ಮ ಒಳ್ಳೆಯದಕ್ಕೇ ಇದನ್ನು ಹೇಳುತ್ತಿದ್ದೇವೆ. ಇಲ್ಲವಾದಲ್ಲಿ ನಿಮಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಜನರಿಗೆ ಗೊತ್ತಿದೆ ವಿನೋದ್‌ ಬನ್ಸಾಲ್‌  ರಾಷ್ಟ್ರೀಯ ವಕ್ತಾರ ವಿಶ್ವ ಹಿಂದೂ ಪರಿಷತ್ತು ಸಿಬಲ್‌ ಟ್ವೀಟ್‌: ಸುಳ್ಳು ಸುದ್ದಿ ‘ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ರಾಮಮಂದಿರ ನಿರ್ಮಾಣವಾಗುವ ಮೊದಲೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ರಾಜ್ಯಸಭಾ ಸದಸ್ಯ ವಕೀಲ ಕಪಿಲ್‌ ಸಿಬಲ್‌ ಅವರು ಟ್ವೀಟ್‌ ಮಾಡಿದ್ದಾರೆ ಎನ್ನಲಾದ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್‌ ಹಂಚಿಕೊಂಡ ಕೆಲವು ‘ಎಕ್ಸ್‌’ ಖಾತೆದಾರರು ‘ದಿನಾಂಕ ಹತ್ತಿರವಾಗುತ್ತಿದೆ. ಕಪಿಲ್‌ ಸಿಬಲ್‌ ಅವರಿಗೆ ಯಾರಾದರೂ ನೆನಪಿಸಿ’ ಎಂದು ಬರೆದುಕೊಂಡಿದ್ದಾರೆ. ಆದರೆ ಇದೊಂದು ಸುಳ್ಳು ಸುದ್ದಿಯಾಗಿದೆ. ಪೋಸ್ಟರ್‌ನಲ್ಲಿ ಸಿಬಲ್‌ ಅವರು 2020ರಲ್ಲಿ ಈ ಮಾತನ್ನು ಹೇಳಿದ್ದಾಗಿ ಗೊತ್ತಾಗುತ್ತದೆ. ಆದರೆ ಸಿಬಲ್‌ ಅವರ ‘ಎಕ್ಸ್‌’ ಖಾತೆಯನ್ನು 2020ರಿಂದ ಇಲ್ಲಿಯವರೆಗೆ ಹುಡುಕಾಡಿದಾದರೂ ಇಂಥದೊಂದು ಟ್ವೀಟ್‌ ಕಾಣಿಸುವುದಿಲ್ಲ. ಈ ಪೋಸ್ಟರ್‌ ಬಗ್ಗೆ ಸಿಬಲ್‌ ಅವರೇ ಡಿ.24ರಂದು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಇಂಥ ಯಾವುದೇ ಟ್ವೀಟ್‌ ಅನ್ನು ನಾನು ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT