ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ಕಾರ್ಮಿಕರ ರಕ್ಷಣೆಯಲ್ಲಿ ಭರವಸೆ ಮೂಡಿಸಿದ ನಿಷೇಧಿತ ಇಲಿ ಬಿಲ ಗಣಿಗಾರಿಕೆ

Published 28 ನವೆಂಬರ್ 2023, 9:31 IST
Last Updated 28 ನವೆಂಬರ್ 2023, 10:11 IST
ಅಕ್ಷರ ಗಾತ್ರ

ಉತ್ತರಕಾಶಿ: ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಕಳೆದ 16 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವಲ್ಲಿ 12 ಜನ ಪರಿಣಿತರ ತಂಡ ಅವಿರತ ಶ್ರಮ ಹಾಕಿದೆ. ಇದರ ಪರಿಣಾಮ ಕಾರ್ಮಿಕರನ್ನು ತಲುಪಲು ಕೊರೆಯುತ್ತಿರುವ ಸುರಂಗ ಕೇವಲ 3 ಮೀಟರ್‌ನಷ್ಟು ಮಾತ್ರ ಬಾಕಿ ಇದೆ.

ಉತ್ತರ ಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಹೆದ್ದಾರಿಗೆ ಕೊರೆಯುತ್ತಿರುವ ಸುರಂಗ ನಿರ್ಮಾಣ ಸಂದರ್ಭದಲ್ಲಿ ಗುಡ್ಡ ಕುಸಿದ ಪರಿಣಾಮ 41 ಕಾರ್ಮಿಕರು ಒಳಗೆ ಸಿಲುಕಿದರು. ಸಿಲುಕಿರುವ ಕಾರ್ಮಿಕರನ್ನು ಹೊರತರಲೇಬೇಕು ಎಂಬ ಇವರ ದೃಢ ನಿರ್ಧಾರಕ್ಕೆ ನೆರವಾಗಿದ್ದು, ಇಲಿ ಬಿಲ ಕೊರೆಯುವ ತಂತ್ರಜ್ಞಾನ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಇಲಿ ಬಿಲ ತಂತ್ರಜ್ಞಾನದಲ್ಲಿ ಗಣಿಗಾರಿಕೆ ನಡೆಸುವುದುನ್ನು ನಿಷೇಧಿಸಿದೆ. ಆದರೆ ಸದ್ಯ ಕಾರ್ಮಿಕರನ್ನು ಹೊರತರಲು ಈ ತಂತ್ರಜ್ಞಾನವೇ ಕೈಹಿಡಿದಿದೆ.

ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಕೊರೆಯುತ್ತಿದ್ದ ಯಂತ್ರ ಕೈಕೊಟ್ಟ ನಂತರ, ಕಾರ್ಮಿಕರೇ ಸುರಂಗ ಕೊರೆಯಲು ಮುಂದಾದರು. ನಡುವೆ 12 ಮೀಟರ್ ಬಾಕಿ ಇದ್ದಾಗ ಎದುರಾದ ಸ್ಟೀಲ್‌ ಕೊಳವೆಯೊಂದು ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು. ಇದರಿಂದ ನಾಲ್ಕು ದಿನಗಳ ಹಿಂದೆಯೇ ಮುಗಿಯಬೇಕಾದ ಕೆಲಸ, ವಿಳಂಬವಾಯಿತು.

ಚಾರ್‌ಧಾಮ್ ಮಾರ್ಗದಲ್ಲಿ ಕುಸಿದ ಸುರಂಗದೊಳಗೆ ಸಿಲುಕಿರುವವರನ್ನು ಹೊರತರಲು ಅಡ್ಡವಾಗಿ ಸುರಂಗ ಕೊರೆಯುವ ಪ್ರಯತ್ನ ಸಾಗಿದೆ. ಸದ್ಯದ ಈ ಪ್ರಯತ್ನ 54 ಮೀಟರ್ ದೂರ ಕ್ರಮಿಸಲು ಸಾಧ್ಯವಾಗಿದೆ. ಆದರೆ ಸಿಲುಕಿರುವ ಕಾರ್ಮಿಕರು ಸುರಕ್ಷಿತವಾಗಿ ಮರಳುವಂತೆ ಅವರ ಕುಟುಂಬದವರು ಮಾತ್ರವಲ್ಲದೇ ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಈ ಹಂತದಲ್ಲಿ ನಿಷೇಧಿತ ಇಲಿ ಬಿಲ ಕೊರೆಯುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದರು.

ಏನಿದು ಇಲಿ ಬಿಲ ಗಣಿಗಾರಿಕೆ?

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅತ್ಯಂತ ಅಪಾಯಕಾರಿ ಪದ್ಧತಿ ಎಂದರೆ ಇಲಿ ಬಿಲ ಗಣಿಗಾರಿಕೆ (Rat Hole minng) ತಂತ್ರಜ್ಞಾನ. ಕಳ್ಳತನದಲ್ಲಿ ಗಣಿಗಾರಿಕೆ ನಡೆಸುವವರು ಅನುಸರಿಸುವ ಇಲಿ ಬಿಲ ಗಣಿಗಾರಿಕೆಯು ಮೇಘಾಲಯ ಒಳಗೊಂಡಂತೆ ಈಶಾನ್ಯ ರಾಜ್ಯಗಳಲ್ಲಿ ಈ ಪದ್ಧತಿ ಬಳಕೆಯಲ್ಲಿತ್ತು. ಇದರಲ್ಲಿ ಕಿರಿದಾದ ಹಾಗೂ ಲಂಬವಾದ ಸುರಂಗವನ್ನು ಕೊರೆಯಲಾಗುತ್ತದೆ. ಒಬ್ಬ ಸಣ್ಣ ಮನುಷ್ಯನಷ್ಟೇ ಒಳಗೆ ಇಳಿಯುವಷ್ಟು ಜಾಗ ಮಾತ್ರ ಇದರಲ್ಲಿ ಇರುತ್ತದೆ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರನ್ನು ಈ ಸುರಂಗದೊಳಗೆ ಕಳುಹಿಸಲಾಗುತ್ತದೆ. ಮಂಡಿ ಮೇಲೆ ಸುರಂಗದೊಳಗೆ ಸಾಗುವ ಇವರು ಪಿಕಾಸಿಗಳನ್ನು ಬಳಸಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಾರೆ.

ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನದಲ್ಲೂ ಎರಡು ಬಗೆ. ಒಂದು ಗುಡ್ಡದ ಇಳಿಜಾರಿಗೆ ಲಂಬವಾಗಿ ಸುರಂಗ ಕೊರೆಯುವುದು. ಕಲ್ಲಿದ್ದಲ್ಲಿನ ನಿಕ್ಷೇಪದ ಸಣ್ಣ ಪದರ ಸಿಗುವವರೆಗೂ ಸುರಂಗ ಕೊರೆಯುತ್ತಲೇ ಸಾಗುವುದು. ಇದು 2 ಮೀಟರ್‌ಗಿಂತಲೂ ಕಿರಿದಾಗಿರುತ್ತದೆ.

ಮತ್ತೊಂದು, ಆಯತಾಕಾರದ ಸುರಂಗ ಕೊರೆಯುವ ತಂತ್ರ. ಇದು ಸುಮಾರು 10ರಿಂದ 100 ಚದರ ಮೀಟರ್‌ ವರೆಗೂ ಕೊರೆಯಲಾಗುತ್ತದೆ. ಒಮ್ಮೆ 100ರಿಂದ 400 ಅಡಿ ಆಳ ತಲುಪಿದ ನಂತರ, ಲಂಬವಾದ ಗುಂಡಿಯನ್ನು ಅಗೆಯಲಾಗುತ್ತದೆ. ಕಲ್ಲಿದ್ದಲು ನಿಕ್ಷೇಪ ಪತ್ತೆಯಾಗುತ್ತಿದ್ದಂತೆ ಸಣ್ಣದ ಇಲಿ ಬಿಲ ಗಾತ್ರದ ಸುರಂಗ ಕೊರೆವನ್ನು ಅಡ್ಡವಾಗಿ ಕೊರೆಯಲಾಗುತ್ತದೆ. ಅದರ ಮೂಲಕ ಕಾರ್ಮಿಕರು ಇಳಿದು ಕಲ್ಲಿದ್ದಲು ಹೊರಕ್ಕೆ ತೆಗೆಯುತ್ತಾರೆ.

ಇಲಿ ಬಿಲ ಗಣಿಗಾರಿಕೆ ಪರಿಣಿತರು ತಮಗೊಂದು ಅವಕಾಶ ನೀಡಿದರೆ ಕೆಲವೇ ಗಂಟೆಗಳಲ್ಲಿ ಸುರಂಗ ಕೊರೆದು ಪೂರ್ಣಗೊಳಿಸುವ ಭರವಸೆ ನೀಡಿದ್ದರು.

ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನಕ್ಕೆ ನಿಷೇಧವೇಕೆ?

ಇಲಿ ಬಿಲ ಗಣಿಗಾರಿಕೆ ಕಾರ್ಮಿಕರಿಗೆ ಅಪಾಯಕಾರಿ ಮಾತ್ರವಲ್ಲದೇ, ಪರಿಸರಕ್ಕೂ ಮಾರಕ ಎಂದೆನ್ನಲಾಗಿದೆ. ಇದರಲ್ಲಿ ನದಿಗಳ ಆಮ್ಲೀಕರಣ, ಅರಣ್ಯ ನಾಶ, ಮಣ್ಣು ಸವಕಳಿ ಹಾಗೂ ಸ್ಥಳಿಯ ಪರಿಸರ ನಾಶದಂತ ಸಮಸ್ಯೆಗಳು ಎದುರಾಗುವ ಅಪಾಯ ಇದೆ ಎಂದೇ ನಂಬಲಾಗಿದೆ.

ಹೀಗೆ ತೆರೆಯಲಾದ ಇಲಿ ಬಿಲಗಳಿಂದ ಆಮ್ಲೀಯ ಅಂಶ ಗಣಿಗಳಿಂದ ಹರಿಯುತ್ತದೆ. ಇದನ್ನು ಆ್ಯಸಿಡ್ ಮೈನ್ ಡ್ರೈನೇಜ್‌ (ಎಎಂಡಿ) ಎಂದೇ ಕರೆಯಲಾಗುತ್ತದೆ. ಇದು ನದಿ ನೀರಿನ ಗುಣಮಟ್ಟ ಹಾಳು ಮಾಡುತ್ತದೆ. ಇದು ಜೀವವೈವಿಧ್ಯಕ್ಕೂ ಮಾರಕ. ಇದು ಭಾರತಕ್ಕೆ ಮಾತ್ರವಲ್ಲದೇ, ಬಾಂಗ್ಲಾದೇಶಕ್ಕೆ ಹರಿಯುವ ನೀರೂ ಕಲುಶಿತಗೊಳ್ಳುತ್ತಿದೆ. ಇದರಿಂದಾಗಿ 2014ರಲ್ಲಿ ಇಲಿ ಬಿಲ ತಂತ್ರಜ್ಞಾನದ ಗಣಿಗಾರಿಕೆಯನ್ನು ಹಸಿರು ನ್ಯಾಯಮಂಡಳಿ ನಿಷೇಧಿಸಿದೆ.

ಇದೀಗ ಸಿಲ್ಕ್ಯಾರಾದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವಲ್ಲಿ ಇಲಿ ಬಿಲ ತಂತ್ರಜ್ಞಾನದ ಗಣಿಗಾರಿಕೆ ಹೇಗೆ ನೆರವಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT