ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ತಮಿಳುನಾಡಿನಲ್ಲಿ ವರುಣಾರ್ಭಟ: 100ಕ್ಕೂ ಹೆಚ್ಚು ಮನೆಗಳು ಜಲಾವೃತ

Published 18 ಡಿಸೆಂಬರ್ 2023, 9:55 IST
Last Updated 18 ಡಿಸೆಂಬರ್ 2023, 9:55 IST
ಅಕ್ಷರ ಗಾತ್ರ

ಚೆನ್ನೈ/ಕನ್ಯಾಕುಮಾರಿ: ಭಾನುವಾರ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗಿದ್ದು, ತಿರುನಲ್ವೇಲಿ, ತೂತುಕುಡಿ ಹಾಗೂ ಕನ್ಯಾಕುಮಾರಿ ಜಿಲ್ಲೆಗಳ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿನ ರಸ್ತೆಗಳು ಮತ್ತು ಹೆದ್ದಾರಿಗಳು ನದಿಗಳಂತೆ ಗೋಚರಿಸುತ್ತಿವೆ.

ಪ್ರವಾಹದ ನೀರು ಜನವಸತಿ ಪ್ರದೇಶ ಹಾಗೂ ರಸ್ತೆಗಳ ಮೇಲೆ ಹರಿಯುತ್ತಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನರು ಆತಂಕಗೊಂಡಿದ್ದಾರೆ.

100ಕ್ಕೂ ಹೆಚ್ಚು ಮನೆಗಳು ಜಲಾವೃತ:

ತಿರುನೆಲ್ವೇಲಿಯ ಸೀವಲಪೇರಿಯಲ್ಲಿನ ಕೆಲ ನಿವಾಸಿಗಳು ಎರಡು ಅಂತಸ್ತಿನ ಮನೆಗಳ ಟೆರೇಸ್ ಮೇಲೆ ಆಶ್ರಯ ಪಡೆದಿದ್ದಾರೆ. ಇಲ್ಲಿನ ಮೀನಾಕ್ಷಿಪುರಂನಲ್ಲೂ ಇದೇ ದೃಶ್ಯ ಕಂಡುಬಂತು. ನಾಗರಕೋಯಿಲ್‌ನ ನೆಸಾವಲರ್ ಕಾಲೋನಿಯಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣ ತಂಡಗಳು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ. ‘ಇಂತಹ ಮಳೆ ಮತ್ತು ಪ್ರವಾಹವನ್ನು ನಾವು ಹಿಂದೆಂದೂ ನೋಡಿಲ್ಲ' ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತೂತುಕುಡಿ ಮತ್ತು ತಿರುನೆಲ್ವೇಲಿಯ ಹಲವಾರು ಸ್ಥಳಗಳಲ್ಲಿ ನೀರಿನ ಮಟ್ಟ 4 ಅಡಿಗಿಂತ ಹೆಚ್ಚಿದೆ. ದಕ್ಷಿಣದ ಎರಡೂ ನಗರಗಳಲ್ಲಿನ ಬಸ್ ನಿಲ್ದಾಣಗಳು ದೊಡ್ಡ ಈಜುಕೊಳಗಳಂತೆ ಕಾಣಿಸಿಸುತ್ತಿವೆ. ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಹಲವು ವಾಹನಗಳು ಸಹ ಮಳೆ ನೀರಿನಲ್ಲಿ ಮುಳುಗಿವೆ.

ವೃದ್ಧೆ ಸಾವು:

ರಾಜಪಾಳ್ಯಂ ಬಳಿಯ ವಸತಿ ಕಾಲೋನಿಯಲ್ಲಿ, ಮಳೆ ಸಂಬಂಧಿತ ಘಟನೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ತಾಮಿರಬರಣಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ಕೋವಿಲ್‌ಪಟ್ಟಿ-ಕಯತಾರು-ತೇವರ್ಕುಲಂ ರಸ್ತೆ ಜಲಾವೃತಗೊಂಡಿವೆ. ಕನ್ಯಾಕುಮಾರಿಯ ಇರವಿಪುದೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆರೆ ಕಟ್ಟೆಗಳು ಒಡೆದು ಪ್ರವಾಹದ ಸಂಕಷ್ಟವನ್ನು ಹೆಚ್ಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT