ನವದೆಹಲಿ: ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿರುವ ಕುಂಡಲಿ ಗಡಿ ಹತ್ತಿರ ಸೋಮವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ದೆಹಲಿಯ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗಳು ಮೃತಪಟ್ಟಿದ್ದಾರೆ.
ಪೊಲೀಸರು ಇದ್ದ ಕಾರು ರಾತ್ರಿ 11.30ರ ಸುಮಾರಿಗೆ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಇನ್ಸ್ಪೆಕ್ಟರ್ಗಳನ್ನು ವಾಯುವ್ಯ ಜಿಲ್ಲೆಯ ವಿಶೇಷ ಸಿಬ್ಬಂದಿ ವಿಭಾಗದ ದಿನೇಶ್ ಬೆನಿವಾಲ್ ಮತ್ತು ಭಯೋತ್ಪಾದನೆ ತಡೆ ಘಟಕದ ರಣವೀರ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಖಾಸಗಿ ವಾಹನದಲ್ಲಿ ಸೋನಿಪತ್ನಲ್ಲಿರುವ ತಮ್ಮ ಮನೆಗಳಿಗೆ ವಾಪಸ್ ಆಗುತ್ತಿದ್ದರು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಟ್ಟ ಹೊಗೆ ಆವರಿಸಿತ್ತು. ಹೀಗಾಗಿ, ರಸ್ತೆಯಲ್ಲಿ ನಿಂತಿದ್ದ ಟ್ರಕ್ ಕಾರಿನಲ್ಲಿದ್ದವರಿಗೆ ಕಾಣಿಸದೆ ಅಪಘಾತ ಸಂಭವಿಸಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.