ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ‘ಇಂಡಿಯಾ’ ಮೈತ್ರಿಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿರುವ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಠಾಕ್ರೆ, ‘ಚುನಾವಣಾ ಬಾಂಡ್ಗಳ ವಿವರಗಳು ಬೆಳಕಿಗೆ ಬಂದಿರುವುದರಿಂದ ಬಿಜೆಪಿಯ ಮುಖವಾಡ ಕಳಚಿದೆ. ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದ್ದು, ಜನರ ಮುಂದೆ ಬಿಜೆಪಿಯ ನೈಜ ಮುಖ ಬಹಿರಂಗಗೊಂಡಿದೆ. ಅದು ಭ್ರಷ್ಟ ಜನತಾ ಪಕ್ಷವಾಗಿದೆ’ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಬಾಂಡ್ಗಳು ಬಿಜೆಪಿಯನ್ನು ಬಯಲಿಗೆಳೆದಿವೆ. ನಿಜವಾದ ದರೋಡೆಕೋರರು ಯಾರು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಚುನಾವಣಾ ಬಾಂಡ್ಗಳ ಸಮಸ್ಯೆಯಿಂದ ಗಮನವನ್ನು ಬೇರೆಡೆ ಸೆಳೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಠಾಕ್ರೆ ಆರೋಪಿಸಿದ್ದಾರೆ.
‘ಕೇಜ್ರಿವಾಲ್ ಮತ್ತು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೋರೆನ್ ಅವರನ್ನು ಜೈಲಿಗೆ ಹಾಕಲಾಗಿದೆ. ಇತರರಿಗೆ ಕಿರುಕುಳ ನೀಡಲಾಗುತ್ತಿದೆ. ಬಿಜೆಪಿಯೊಂದಿಗೆ ಕೈಜೋಡಿಸುವವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ದೇಶದಲ್ಲಿ ಈಗಾಗಲೇ ಸರ್ವಾಧಿಕಾರವಿದೆ. ಚುನಾವಣೆಯು ಮುಕ್ತ ಮತ್ತು ನ್ಯಾಯಯುತವಾಗಿರಬೇಕು’ ಎಂದು ಠಾಕ್ರೆ ಹೇಳಿದ್ದಾರೆ.
ಬಿಜೆಪಿಯ ‘ಮೋದಿ ಕಾ ಪರಿವಾರ್’ ಅಭಿಯಾನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಟುಂಬದ ಅರ್ಥ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಾನು (ಉದ್ಧವ್ ಠಾಕ್ರೆ) ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ‘ನನ್ನ ಕುಟುಂಬ, ನನ್ನ ಜವಾಬ್ದಾರಿ‘ ಎಂದು ಸಂಕಲ್ಪ ಮಾಡಿದ್ದೆ. ಆದರೆ, ನಿಮ್ಮ ಪರಿವಾರದಲ್ಲಿ ನೀವು (ನರೇಂದ್ರ ಮೋದಿ) ಮತ್ತು ನಿಮ್ಮ ಕುರ್ಚಿ ಮಾತ್ರ ಇದೆ ಎಂದು ಠಾಕ್ರೆ ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆಸುತ್ತಿರುವ ರ್ಯಾಲಿಯು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಗುರಿಯನ್ನು ಹೊಂದಿದೆಯೇ ಹೊರತು, ಯಾವುದೇ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ನಡೆಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.