ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಮಾತಾ ಕಿ ಜೈ’ ಘೋಷಣೆ ಕೈಬಿಡುವುದೇ ಆರ್‌ಎಸ್‌ಎಸ್: ಪಿಣರಾಯಿ ಪ್ರಶ್ನೆ

Published 25 ಮಾರ್ಚ್ 2024, 14:28 IST
Last Updated 25 ಮಾರ್ಚ್ 2024, 14:28 IST
ಅಕ್ಷರ ಗಾತ್ರ

ಮಲಪ್ಪುರಂ: ‘ಭಾರತ್ ಮಾತಾ ಕಿ ಜೈ’ ಮತ್ತು ‘ಜೈ ಹಿಂದ್’ ಘೋಷಣೆಗಳನ್ನು ಮೊದಲು ಕೂಗಿದ್ದು ಮುಸ್ಲಿಮರು. ಹಾಗಾಗಿ ಈ ಘೋಷಣೆಗಳನ್ನು ಸಂಘ ಪರಿವಾರವು ಕೈ ಬಿಡುವುದೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.

ಮುಸ್ಲಿಂ ಬಾಹುಳ್ಯದ ಮಲಪ್ಪುರಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಸಿಪಿಐ(ಎಂ) ಆಯೋಜಿಸಿದ್ದ ನಾಲ್ಕನೇ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಭಾರತ್ ಮಾತಾ ಕಿ ಜೈ’ ಘೋಷಣೆಯನ್ನು ರೂಪಿಸಿದ್ದು ಅಜೀಮುಲ್ಲಾ ಖಾನ್ ಎನ್ನುವ ಮುಸ್ಲಿಂ ವ್ಯಕ್ತಿ. ಅದೇ ರೀತಿ ‘ಜೈ ಹಿಂದ್’ ಘೋಷಣೆಯನ್ನು ಮೊದಲು ಕೂಗಿದ್ದು ರಾಜತಾಂತ್ರಿಕ ಅಧಿಕಾರಿಯಾಗಿದ್ದ ಅಬಿದ್ ಹಸನ್. 50 ಉಪನಿಷತ್‌ಗಳನ್ನು ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿ ಅದನ್ನು ಜಗತ್ತಿನ ಬೇರೆ ಬೇರೆ ಭಾಗ ಮುಟ್ಟಲು ನೆರವಾದವರು ಮೊಘಲ್ ದೊರೆ ಶಹಜಹಾನ್‌ನ ಮಗ ದಾರಾ ಶಿಖೋ. ಇದರ ಜತೆಗೆ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿದ್ದರು. ಬಿಜೆಪಿ ಸರ್ಕಾರವು ಸಿಎಎ ಜಾರಿಗೊಳಿಸುವ ಮೂಲಕ ಮುಸ್ಲಿಮರನ್ನು ದೇಶದ ಎರಡನೇ ದರ್ಜೆ ಪ್ರಜೆಗಳನ್ನಾಗಿಸಲು ಹೊರಟಿದೆ’ ಎಂದು ಅವರು ಟೀಕಿಸಿದರು.

ಆರ್‌ಎಸ್‌ಎಸ್‌ ಮುಖಂಡ ಎಂ.ಎಸ್.ಗೋಳ್ವಾಲ್ಕರ್ ಅವರ ಒಂದು ಪುಸ್ತಕದಿಂದ ‘ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಕಮ್ಯುನಿಸ್ಟರು ಈ ದೇಶದ ಆಂತರಿಕ ಶತ್ರುಗಳು’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ವಿಜಯನ್, ‘ಇದನ್ನು ಅವರು ಪ್ರಾಚೀನ ಗ್ರಂಥಗಳು, ಪುರಾಣ, ವೇದ ಅಥವಾ ಮನುಸ್ಮೃತಿಯಿಂದ ತೆಗೆದುಕೊಂಡಿಲ್ಲ. ಬದಲಿಗೆ ಇದನ್ನು ಹಿಟ್ಲರ್‌ನಿಂದ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT