ನಾಗಪುರ (ಪಿಟಿಐ): ಸಾಲದ ಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಬಿಂಬಿಸಿದ್ದ ಕಲಾವತಿಯ ಅಳಿಯನೇ ಸಾಲ ಬಾಧೆಯಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಲಾವತಿಯ ಕೊನೆಯ ಪುತ್ರಿ ಸಂಗೀತಾ ಅವರ ಪತಿ ಸಂಜಯ್ ಕಡಾಸ್ಕರ್ (25) ಆತ್ಮಹತ್ಯೆ ಮಾಡಿಕೊಂಡವರು. ಯವತ್ಮಾಲ್ ಜಿಲ್ಲೆಯ ಕಥದೋಡಾದ ತನ್ನ ಮನೆಯಲ್ಲಿ ಗುರುವಾರ ಕೀಟನಾಶಕ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಸರ್ಕಾರೇತರ ಸಂಘಟನೆ ವಿದರ್ಭಾ ಜನಾಂದೋಲನ ಸಮಿತಿಯ ಅಧ್ಯಕ್ಷ ಕಿಶೋರ್ ತಿವಾರಿ ತಿಳಿಸಿದ್ದಾರೆ.
ರಿಕ್ಷಾ ಚಾಲಕರಾಗಿದ್ದ ಕಡಾಸ್ಕರ್ ಅವರ 4.5 ಎಕರೆ ಜಮೀನಿನಲ್ಲಿ ಸಕಾಲಕ್ಕೆ ಮಳೆ ಬಾರದೆ ಬೆಳೆ ನಷ್ಟವಾಗಿತ್ತು. ಇದರಿಂದ ತಮ್ಮ ರಿಕ್ಷಾ ಕೊಳ್ಳಲು ಮಾಡಿದ್ದ ಸಾಲ ತೀರಿಸುವುದು ಅವರಿಗೆ ಸಾಧ್ಯವಾಗಿರಲಿಲ್ಲ. ರಾಹುಲ್ ಗಾಂಧಿ ಅವರು ಕಲಾವತಿ ಅವರ ಮನೆಗೆ ಭೇಟಿ ನೀಡಿ ಸಂಸತ್ತಿನಲ್ಲಿನ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಇದೇ ವಿಷಯ ಪ್ರಸ್ತಾಪಿಸಿದ್ದರು. ಆ ಮೂಲಕ ಕಲಾವತಿ ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದರು.