ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ವಿರುದ್ಧ ತೊಡೆತಟ್ಟಿದ ಆಯನೂರು; ಕಾಂಗ್ರೆಸ್‌ ಸೇರ್ಪಡೆಗೆ ಸಜ್ಜು?

Last Updated 4 ಏಪ್ರಿಲ್ 2023, 2:14 IST
ಅಕ್ಷರ ಗಾತ್ರ

ಶಿವಮೊಗ್ಗ: ತಮ್ಮದೇ ಪಕ್ಷದ ಶಾಸಕ ಕೆ.ಎಸ್.ಈಶ್ವರಪ್ಪ ವಿರುದ್ಧ ತೊಡೆತಟ್ಟಿರುವ ಬಿಜೆಪಿಯ ಆಯನೂರು ಮಂಜುನಾಥ್, ಇನ್ನೂ 13 ತಿಂಗಳ ಅವಧಿ ಇದ್ದರೂ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.‌

ಆಯನೂರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅದನ್ನು ಅವರು ಈವರೆಗೂ ಖಚಿತಪಡಿಸಿಲ್ಲ. ಆದರೆ, ಶಿವಮೊಗ್ಗ ನಗರ ಕ್ಷೇತ್ರಕ್ಕೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ನ 11 ಆಕಾಂಕ್ಷಿಗಳೇ ‘ಅತೃಪ್ತಿ’ ನೆಪದಲ್ಲಿ ಪದೇ ಪದೇ ಅದನ್ನು ಸಾರ್ವಜನಿಕವಾಗಿ ಹೇಳಿದ್ದಾರೆ.

ಕಾಂಗ್ರೆಸ್ ಬಯಸಿದ್ದು: ಶಿವಮೊಗ್ಗ ನಗರ ಕ್ಷೇತ್ರವು 1989ರ ಚುನಾವಣೆಯಿಂದ ಕೆ.ಎಸ್‌.ಈಶ್ವರಪ್ಪ ಅವರಿಗೆ ಐದು ಬಾರಿ ನೆಲೆ ಕಲ್ಪಿಸಿದೆ. ಆದರೆ, 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಲಿಂಗಾಯತರಾದ ಎಚ್‌.ಎಂ. ಚಂದ್ರಶೇಖರಪ್ಪ ಹಾಗೂ 2013ರಲ್ಲಿ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನಕುಮಾರ್ ಅವರು ಈಶ್ವರಪ್ಪ ಅವರನ್ನು ಮಣಿಸಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಪ್ರಸನ್ನಕುಮಾರ್‌ 46,107 ಮತಗಳ ಭಾರೀ ಅಂತರದಿಂದ ಸೋತಿದ್ದರು. ಈ ಬಾರಿ ರಣತಂತ್ರ ಬದಲಾಯಿಸಲು ಕಾಂಗ್ರೆಸ್‌ ಮುಂದಾಗಿದ್ದು, ಈಶ್ವರಪ್ಪ ಅವರನ್ನು ಮಣಿಸಲು ಲಿಂಗಾಯತ ಸಮುದಾಯದ ಜೊತೆಗೆ ಅಲ್ಪಸಂಖ್ಯಾತರ ಮತಗಳನ್ನು ಒಗ್ಗೂಡಿಸುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಆಯನೂರು ಅವರತ್ತ ಚಿತ್ತ ಹರಿಸಿದೆ ಎಂದು ಹೇಳಲಾಗುತ್ತಿದೆ.

‘ಹೊಸಬರ ಬದಲಿಗೆ ಅನುಭವಿ ಆಯನೂರು ಅವರನ್ನು ಕಣಕ್ಕೆ ಇಳಿಸೋಣ. ಬಿಜೆಪಿ ಕಟ್ಟಿಹಾಕಲು ಅವರೇ ಸೂಕ್ತ ಎಂಬುದನ್ನು ವರಿಷ್ಠರಿಗೆ ಮನದಟ್ಟು ಮಾಡಿದ್ದೇವೆ. ಆಯನೂರು ಅವರೊಂದಿಗೆ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದು, ಪಕ್ಷ ಸೇರ್ಪಡೆಗೆ ರಂಗ ಸಜ್ಜಾಗಿದೆ. ಅಂತೆಯೇ ಅವರು ರಾಜೀನಾಮೆ ಮಾತು ಆಡಿದ್ದಾರೆ’ ಎಂದು ಮಲೆನಾಡು ಭಾಗದ ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.

ಕಾಂಗ್ರೆಸ್‌ ನಾಯಕರ ಸೂಚನೆಯಂತೆ ಈಗಾಗಲೇ ಈಶ್ವರಪ್ಪ ವಿರುದ್ಧ ಆಯನೂರು ಅವರು ಮೊದಲ ಸುತ್ತಿನಲ್ಲಿ ‘ಫ್ಲೆಕ್ಸ್ ಯುದ್ಧ’ ಮುಗಿಸಿದ್ದಾರೆ. ಇದು ಶಿವಮೊಗ್ಗದಲ್ಲಿನ ಈಶ್ವರಪ್ಪ ವಿರೋಧಿ ಪಾಳಯದಲ್ಲಿ ಆಯನೂರು ಅವರ ವರ್ಚಸ್ಸು ಹೆಚ್ಚಿಸಿದೆ ಎನ್ನುತ್ತಾರೆ.

ಈ ಬೆಳವಣಿಗೆ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಕಣ್ಣು ಕೆಂಪಾಗಿಸಿದೆ. ಇಷ್ಟು ದಿನ ಟಿಕೆಟ್‌ಗಾಗಿ ಪರಸ್ಪರ ಪೈಪೋಟಿಯಲ್ಲಿ ತೊಡಗಿದ್ದವರನ್ನು ‘ಆಯನೂರು’ ನೆರಳು ಒಂದುಗೂಡಿಸಿದೆ. ‘ಆಯನೂರು ಕಾಂಗ್ರೆಸ್ ಸೇರ್ಪಡೆ ಬೇಡ’ ಎಂದು ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಕೊಟ್ಟು ಬಂದಿದ್ದಾರೆ.

ಯಡಿಯೂರಪ್ಪ ಅವರ ನೀಲಿಗಣ್ಣಿನ ಹುಡುಗ ಮಂಜುನಾಥ್
ಈಗಾಗಲೇ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳನ್ನು ಪ್ರತಿನಿಧಿಸಿರುವ ಆಯನೂರು ಮಂಜುನಾಥ್, ಶಿವಮೊಗ್ಗದ ಮಟ್ಟಿಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ನೀಲಿಗಣ್ಣಿನ ಹುಡುಗ.

ಹೀಗಾಗಿಯೇ ಆಯನೂರು ಮಂಜುನಾಥ್ ಅವರ ಈ ರಾಜಕೀಯ ನಡೆಗಳ ಹಿಂದೆ ಯಡಿಯೂರಪ್ಪ ಅವರ ನೆರಳನ್ನು ಹುಡುಕುವ ಪ್ರಯತ್ನವು ಅವರ ವಿರೋಧಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT