ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲ್ಪನಿಕ ಲೆಕ್ಕದಿಂದ ಪ್ರಯೋಜನವಿಲ್ಲ: ಬೊಮ್ಮಾಯಿ ತರಾಟೆ

Published 15 ಫೆಬ್ರುವರಿ 2024, 16:12 IST
Last Updated 15 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರದಿಂದ ರಾಜ್ಯಕ್ಕೆ ನಿಜಕ್ಕೂ ಅನ್ಯಾಯವಾಗಿದ್ದರೆ ಎಲ್ಲರೂ ಕೂಡಿಯೇ ಕೇಳೋಣ. ಅದರ ಬದಲು ಯಾರದ್ದೋ ಸಲಹೆ ಕೇಳಿ ₹1.87 ಲಕ್ಷ ಕೋಟಿ ನಷ್ಟ ಆಗಿದೆ ಎಂದು ಕಾಲ್ಪನಿಕ ಶೇಖ್‌ ಮೊಹಮದ್‌ ಲೆಕ್ಕ ಹೇಳಿದರೆ ಪ್ರಯೋಜನವಿಲ್ಲ’ ಎಂದು ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ‘ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ ಕುರಿತು ವಾಸ್ತವ ಅಂಶಗಳ ಮೇಲೆ ಚರ್ಚೆ ಮಾಡಿದರೆ ಅನುಕೂಲ. ರಾಜಕೀಯ ಬೆರೆಸಿ ಮಾತನಾಡಿದರೆ ರಾಜ್ಯಕ್ಕೇ ನಷ್ಟ’ ಎಂದು ಹೇಳಿದರು.

‘ಈಗಾಗಲೇ 15ನೇ ಹಣಕಾಸು ಆಯೋಗದ ವರದಿ ಜಾರಿಯಲ್ಲಿದೆ. ಅದು ಏನು ಶಿಫಾರಸು ಮಾಡಿದೆಯೋ ಹಾಗೆಯೇ ನಡೆಯುತ್ತದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ಆಗುವುದಿಲ್ಲ. ಈಗ ಎಲ್ಲವೂ ಮುಗಿದು ಹೋಗಿದೆ. ಆಯೋಗದ ಅವಧಿ 2026ರವರೆಗೆ ಇದೆ. ಈ ಸಂದರ್ಭದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದು ರಾಜಕೀಯವಲ್ಲದೆ ಮತ್ತೇನೂ ಅಲ್ಲ’ ಎಂದರು.

‘ಭ್ರದಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5,300 ಕೋಟಿ ಅನುದಾನ ಘೋಷಣೆ ಮಾಡಿತ್ತು. ಅದನ್ನು ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಚರ್ಚೆ ಮಾಡೋಣ. 16ನೇ ಹಣಕಾಸು ಆಯೋಗ ಬರುತ್ತಿದೆ. ಅದರಲ್ಲಿ ನಮಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಅಷ್ಟೇ. ರಾಜ್ಯಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ನಮಗೂ ಅಷ್ಟೇ ಜವಾಬ್ದಾರಿ ಇದೆ. ಇಬ್ಬರೂ ಸೇರಿ ರಾಜ್ಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡೋಣ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT