ಮೈಸೂರು: ‘ನನಗೆ ಸೆಟ್ಲ್ಮೆಂಟ್ ಮಾಡುತ್ತೇನೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಬ್ಬ ಗೂಂಡಾ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸೆಟ್ಲ್ಮೆಂಟ್ ಮಾಡುತ್ತೇನೆ ಎಂದರೆ ಏನರ್ಥ? ಸಿನಿಮಾದಲ್ಲಿ ಹೇಳುವಂತೆ ಡೈಲಾಗ್ ಹೇಳಿದ್ದಾರೆ’ ಎಂದರು.
‘ನಾನು ಡಿಸಿಎಂ ಸಹೋದರ ಮತ್ತು ಸಂಸದ ಎಂಬ ದುರಹಂಕಾರದಲ್ಲಿ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು. ಕೂಡಲೇ ಅವರಿಗೆ ನೋಟಿಸ್ ನೀಡಿ ಬಂಧಿಸಬೇಕಿತ್ತು. ಆದರೆ, ನನಗೆ ನೋಟಿಸ್ ಕೊಟ್ಟಿದ್ದಾರೆ. ಶಿವಕುಮಾರ್ ಅವರು ನನ್ನ ವಿರುದ್ಧ ಗೂಂಡಾಗಳು ಬಳಸುವಂತಹ ಪದ ಪ್ರಯೋಗಿಸಿದ್ದಾರೆ. ಅರ್ಧ ಸೆಟ್ಲ್ಮೆಂಟ್ ಮಾಡಿದ್ದೇನೆ, ಪೂರ್ಣ ಮಾಡುತ್ತೇನೆ ಎಂದಿದ್ದಾರೆ’ ಎಂದರು.