ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಲಾಕ್ಡೌನ್ ಆದೇಶದಿಂದ ಸಂಕಷ್ಟಕ್ಕೀಡಾಗಿರುವ ಬಾದಾಮಿ ಕ್ಷೇತ್ರದ ಜನರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಿಡಿದಿದ್ದಾರೆ.
ಬಾದಾಮಿ ಕ್ಷೇತ್ರದ ವ್ಯಾಪ್ತಿಯ ಎಲ್ಲ 114 ಗ್ರಾಮಗಳಲ್ಲೂ ಒಂದು ದಿನ ಉಚಿತ ಊಟದ ವ್ಯವಸ್ಥೆ ಮಾಡುವ ಜೊತೆಗೆ ಅಲ್ಲಿನ ಬಡವರು ಹಾಗೂ ಹೊರ ರಾಜ್ಯ, ಜಿಲ್ಲೆಗಳಿಗೆ ಗುಳೇ ಹೋಗಿ ಮರಳಿ ಬಂದ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದಾರೆ.
ಅದಕ್ಕೆ ಪೂರಕವಾಗಿ ಬಾದಾಮಿ ತಾಲ್ಲೂಕಿನ ಮುಷ್ಠಿಗೇರಿ, ನೀಲಗುಂದ, ಜಾಲಿಹಾಳ, ನಂದಿಕೇಶ್ವರ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ವ್ಯಾಪ್ತಿಯ 80 ಹಳ್ಳಿಗಳಲ್ಲಿ ಒಂದು ದಿನದ ಊಟದ ವ್ಯವಸ್ಥೆ ಮಾಡಲು ಅಗತ್ಯವಿರುವ ಅಕ್ಕಿ, ಬೇಳೆ, ಖಾದ್ಯ ತೈಲ, ತರಕಾರಿಯನ್ನುಬುಧವಾರ ಪೂರೈಕೆ ಮಾಡಲಾಯಿತು.
’ಆಯಾ ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಅಡುಗೆ ಸಾಮಗ್ರಿ ವಿತರಿಸಲಾಗಿದೆ. ಊಟ ಸಿದ್ಧಪಡಿಸಿ ಮನೆ ಮನೆಗಳಿಗೆ ವಿತರಿಸುವ ಜವಾಬ್ದಾರಿಯನ್ನು ಪಕ್ಷಾತೀತವಾಗಿ ಗ್ರಾಮದ ಮುಖಂಡರಿಗೆ ವಹಿಸಲಾಗಿದೆ. ಈ ವೇಳೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು ನೀಡಲಾಗುವುದು‘ ಎಂದು ಸಿದ್ದರಾಮಯ್ಯ ಅವರ ಆಪ್ತ ಹೊಳಬಸು ಶೆಟ್ಟರ್ ’ಪ್ರಜಾವಾಣಿ’ಗೆ ತಿಳಿಸಿದರು.
ಆಹಾರ ಕಿಟ್ ದಿನ ನಿತ್ಯದ ಅಡುಗೆಗೆ ಬೇಕಾದ ಸಾಮಗ್ರಿ ಹೊಂದಿರುತ್ತದೆ. ಲಾಕ್ಡೌನ್ ಮುಗಿಯುವವರೆಗೂ ಬಾದಾಮಿ ಪಟ್ಟಣದ ನಿಗದಿತ ಸ್ಥಳದಲ್ಲಿ ನಿತ್ಯ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗುವುದು. ಬಡವರು ಬಂದು ಊಟ ಮಾಡಬಹುದು. ಜೊತೆಗೆ ಕ್ಷೇತ್ರದ ಜನರಿಗೆ ಹಂಚಲು 1 ಲಕ್ಷ ಮಾಸ್ಕ್ ಸಿದ್ಧಪಡಿಸಲಾಗಿದೆ. ಶೀಘ್ರ ಆಯಾ ಗ್ರಾಮ ಪಂಚಾಯ್ತಿ ಪಿಡಿಒಗಳ ಮೂಲಕ ಮನೆ ಮನೆಗೆ ಪೂರೈಕೆ ಮಾಡಲಾಗುವುದು ಎಂದರು.