ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ರೀತಿಯಲ್ಲಿ ವಿಶಿಷ್ಟವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ನಡೆಯಬೇಕು ಎಂಬ ಉದ್ದೇಶದಿಂದ ಮಾಡಲಾದ ತಯಾರಿ ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಗಮನ ಸೆಳೆಯಿತು.
ಡಿಕೆಶಿ ಅವರ ಅಭಿಮಾನಿಗಳ ಬಳಗ ದೊಡ್ಡದು. ಕಾರ್ಯಕ್ರಮದಲ್ಲಿ ಭಾರಿ ಜನದಟ್ಟಣೆ ಆಗಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿದ ಸಂಘಟಕರು, ಗ್ಯಾಲರಿಯಲ್ಲಿ ಹಲವು ಸೀಟುಗಳು ಖಾಲಿ ಉಳಿಯುವಂತೆ ನೋಡಿಕೊಂಡರು.
ಕಚೇರಿಯ ಹೊರಗಡೆ ಕ್ವೀನ್ಸ್ ರಸ್ತೆಯಲ್ಲಿ ನೂರಾರು ಯುವ ಕಾರ್ಯಕರ್ತರು ಇದ್ದರು. ಆದರೆ ಕಾರ್ಯಕ್ರಮ ನಡೆಯುವ ಸಭಾಂಗಣದ ಬಳಿಗೆ ಮಾತ್ರ ಕೆಲವೇ ಕೆಲವು ಮಂದಿ ಬರುವುದಕ್ಕೆ ಅವಕಾಶ ನೀಡಲಾಯಿತು. ಹೀಗಾಗಿ ಸಭಾಂಗಣದ ಒಳಗೆ ನೂಕುನುಗ್ಗಲು ಆಗಲಿಲ್ಲ.
ನಗರದ ವಿವಿಧ ಕಡೆಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ನಗರದ ವಿವಿಧೆಡೆ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು.