ಕಲಬುರ್ಗಿ: ಬಿಜೆಪಿಯವರು ಲಿಂಗಾಯತರನ್ನು ತಮ್ಮ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಆದರೆ, ಆ ಪಕ್ಷದ ಆಸ್ತಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ತೆರಳಲು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರು, ಲಿಂಗಾಯತರಲ್ಲೂ ಸಾಕಷ್ಟು ಜನರು ಕಾಂಗ್ರೆಸ್ ಬೆಂಬಲಿಗರಿದ್ದಾರೆ. ಲಿಂಗಾಯತ ಮುಖಂಡರಾದ ಎಂ.ಬಿ. ಪಾಟೀಲ, ಎಸ್.ಆರ್. ಪಾಟೀಲ, ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ನಾಯಕರಿದ್ದಾರೆ ಎಂದರು
ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ನಲ್ಲಿ ಮ್ಯೂಸಿಕಲ್ ಚೇರ್ ಆಟ ನಡೆದಿದೆ ಎಂಬ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅವರಿಗೆ ತಿರುಗೇಟು ನೀಡಿದ ಅವರು, ಬಿಜೆಪಿಯಲ್ಲೇ ಮ್ಯೂಸಿಕಲ್ ಚೇರ್ ಆಟ ನಡೆದಿದೆ ಎಂದರು.
ರಾಜಕೀಯ ಸಮಾವೇಶಗಳಿಗೆ ಕೊರೊನಾ ಪ್ರಯುಕ್ತ ಅವಕಾಶ ಇಲ್ಲದ್ದರಿಂದ ನಾವೇ ವಿವಿಧ ಸಮುದಾಯಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಅರಿತುಕೊಳ್ಳುತ್ತಿದ್ದೇವೆ ಎಂದರು.
ಜೈಕಾರ: ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಎಂದು ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್ ಮುಖಂಡರಾದ ಶರಣು ಮೋದಿ, ಡಾ.ಕಿರಣ ದೇಶಮುಖ ಇದ್ದರು.
ಬಂಜಾರ ಸಮುದಾಯದ ಕಾರ್ಯಕರ್ತರು ಸಂತ ಸೇವಾಲಾಲರ ಭಾವಚಿತ್ರ ನೀಡಿ ಗೌರವಿಸಿದರು.