ಹೊಸಪೇಟೆ: ‘ದೊಡ್ಡ ಖಾತೆ ಕೊಟ್ಟು, ಅದನ್ನು ಮರಳಿ ಪಡೆದು ಸಣ್ಣ ಖಾತೆ ಕೊಟ್ಟರೆ ನನ್ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ. ಅದಕ್ಕೆ ನಾನು ಉತ್ತರಿಸುತ್ತ ಓಡಾಡಬೇಕಾಗುತ್ತದೆ’ ಎಂದು ಸಚಿವ ಆನಂದ್ ಸಿಂಗ್ ಅವರು ಖಾತೆ ಬದಲಿಸಿರುವುದಕ್ಕೆ ಪ್ರತಿಕ್ರಿಯಿಸಿದರು.
ನಗರದ ಸರ್ಕಾರಿ ಆಸ್ಪತ್ರೆ ಯಲ್ಲಿ ಸೋಮವಾರ ಕಟ್ಟಡ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲಿನಿಂದಲೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನ್ನನ್ನು ಶಾಸಕನಾಗಿಯೇ ಇರಲು ಬಿಡಬೇಕು’ ಎಂದು ಹೇಳಿದರು.
‘ಸದ್ಯ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ದಂತೆ ಕ್ಷೇತ್ರದಲ್ಲಿಯೇ ಇರುವೆ. ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರ ಪಾಲಿಸುತ್ತೇನೆ. ನಾಡಿದ್ದು ಬೆಂಗಳೂರಿಗೆ ತೆರಳಿ ಭೇಟಿ ಮಾಡುವೆ. ಮುಖ್ಯಮಂತ್ರಿಯವರಿಗೆ ಕೆಲ ತಾಂತ್ರಿಕ ಒತ್ತಡಗಳು ಇಬಹುದು. ನನ್ನ ಹಲವು ಬೇಡಿಕೆಗಳನ್ನು ಈಡೇರಿಸಿದ್ದಾರೆ’ ಎಂದರು.
ವಿಜಯನಗರ ಜಿಲ್ಲೆ ಘೋಷಣೆಗೂ ಖಾತೆ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಆಕ್ಷೇಪಣೆ ಸ್ವೀಕರಿಸ ಲಾಗಿದೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಅಂತಿಮ ಅಧಿಸೂಚನೆ ಹೊರಬೀಳಬಹುದು ಎಂದು ಅವರು ಹೇಳಿದರು.