ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿಕ ಎನ್ನಲು ಹೆಮ್ಮೆ ಪಡಿ: ಹೈಕೋರ್ಟ್‌

Published 12 ಜನವರಿ 2024, 15:34 IST
Last Updated 12 ಜನವರಿ 2024, 15:34 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲುʼ ಎಂಬ ಕವಿ ಸರ್ವಜ್ಞನ ತ್ರಿಪದಿಯನ್ನು ತೆರೆದ ಕಲಾಪದಲ್ಲಿ ಉದ್ಧರಿಸಿದ ಹೈಕೋರ್ಟ್‌, ‘ಕೃಷಿ ಉದ್ಯೋಗದ ನಮಗೆ ಬಗ್ಗೆ ಹೆಮ್ಮೆ ಇರಬೇಕುʼ ಎಂದು ಕಿವಿಮಾತು ಹೇಳಿತು.

‘ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲ್ಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ‘ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿಯ ‘ಕಾರಣ ಶೀರ್ಷಿಕೆ’ಯಲ್ಲಿ (ಕಾಸ್‌ ಟೈಟಲ್‌) ಅರ್ಜಿದಾರರ ಉದ್ಯೋಗದ ಬಗ್ಗೆ ನಮೂದಾಗದೇ ಇರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು, ‘ಅರ್ಜಿದಾರರು ಏನು ಉದ್ಯೋಗ ಮಾಡುತ್ತಾರೆ’ ಎಂದು ಅವರ ಪರ ವಕೀಲರನ್ನು ಪ್ರಶ್ನಿಸಿದರು.

ಇದಕ್ಕೆ ಅರ್ಜಿದಾರರ ಪರ ವಕೀಲರು, ‘ಕೃಷಿಕ’ ಎಂದು ತುಂಬಾ ಹಿಂಜರಿಕೆಯ ಸ್ತರದಲ್ಲಿ ನುಡಿದರಲ್ಲದೆ, ‘ವಿವರವನ್ನು ಕೈಫಿಯತ್ತಿನಲ್ಲಿ ವಿವರಿಸಲಾಗಿದೆ’ ಎಂದರು. ಇದಕ್ಕೆ ವರಾಳೆ ಅವರು, ‘ನಿಮ್ಮ ಉದ್ಯೋಗದ ಬಗ್ಗೆ ನಾಚಿಕೆ ಏಕೆ? ಕೃಷಿಕನಾಗುವುದು ತಪ್ಪಲ್ಲ. ವಿಶ್ವದ ಅತ್ಯಂತ ಪುರಾತನ ಉದ್ಯೋಗ ಕೃಷಿ, ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು’ ಎಂದರು.

ತಕ್ಷಣವೇ ಈ ಮಾತಿಗೆ ನ್ಯಾಯಮೂರ್ತಿ ದೀಕ್ಷಿತ್‌ ಅವರು, ಮುಖ್ಯ ನ್ಯಾಯಮೂರ್ತಿಗಳ ಕಿವಿಯಲ್ಲಿ ಸರ್ವಜ್ಞನ ತ್ರಿಪದಿಯನ್ನು ಉಲ್ಲೇಖಿಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು, ‘ಅದನ್ನು ಜೋರಾಗಿ ಅರ್ಜಿದಾರರಿಗೆ ಹೇಳಿಬಿಡಿ’ ಎಂದು ದೀಕ್ಷಿತ್‌ ಅವರನ್ನು ಪ್ರೋತ್ಸಾಹಿಸಿದರು.

ಕೂಡಲೇ ದೀಕ್ಷಿತ್‌ ಅವರು, ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಂ ರಾಟಿ ನಡೆದುದಲ್ಲವೇ ಲೋಕಕ್ಕೆ, ಮೇಟಿಯೇ ಶ್ರೇಷ್ಠ ಸರ್ವಜ್ಞ’ ಎಂಬ ಸಾಲುಗಳನ್ನು  ಉಲ್ಲೇಖಿಸಿದರಲ್ಲದೆ, ಅಲ್ಲೇ ಇದ್ದ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರನ್ನು, ‘ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆಯೇ ಮೇಲಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ನಾಗಾನಂದ ಅವರು, ‘ಹೌದು ಅದು ಅತ್ಯುತ್ತಮ ಮಾತ್ರವಲ್ಲ, ಅದಕ್ಕೆ ತೆರಿಗೆಯೂ ಇಲ್ಲ. ಆದಾಯ ತೆರಿಗೆ ಅಧಿಕಾರಿಗಳ ದಾಳಿಯೂ ಇರುವುದಿಲ್ಲ’ ಎಂದು ಲಘು ಧಾಟಿಯಲ್ಲಿ ಉತ್ತರಿಸಿದರು.

ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿದ ನ್ಯಾಯಮೂರ್ತಿ ದೀಕ್ಷಿತ್‌ ಅವರು, ‘ನೀವು ಉದ್ಯೋಗವನ್ನು ಕೈಫಿಯತ್ತಿನಲ್ಲಿ ಉಲ್ಲೇಖಿಸಿದರೆ ಸಾಲದು. ಮಂಗಳಸೂತ್ರವನ್ನು ಕೊರಳಿಗೇ ಕಟ್ಟಬೇಕು. ಬೇರೆಲ್ಲಿಯೂ ಕಟ್ಟಿದರೆ ಆಗದು’ ಎಂದು ನುಡಿದರು. ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT