ಭಟ್ಕಳ: ನಾಪತ್ತೆಯಾದ ಮೀನುಗಾರರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಮೀನುಗಾರರು ಗುರುವಾರಬೃಹತ್ ಪ್ರತಿಭಟನಾ ಮೆರವಣಿಗೆಯು ಹಮ್ಮಿಕೊಂಡರು.
ಪಟ್ಟಣದ ಸಂತೆ ಮಾರುಕಟ್ಟೆಯ ಮೂಲಕ ಸಂಚರಿಸಿದ ಪ್ರತಿಭಟನಾಕಾರರು, ಪ್ರಮುಖ ಬೀದಿಗಳಲ್ಲಿ ಸಾಗಿದರು. ಬಳಿಕ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಮೀನುಗಾರರನ್ನು ಕೂಡಲೇ ಪತ್ತೆ ಮಾಡಿಕೊಡುವಂತೆ ಆಗ್ರಹಿಸಿದರು. ಇದೇವೇಳೆ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಹಿನ್ನೆಲೆ: ಡಿ.13ರಂದು ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆಂದು ಎಂಟು ಮಂದಿ ಮೀನುಗಾರರು ‘ಸುವರ್ಣ ತ್ರಿಭುಜ’ ಹೆಸರಿನ ದೋಣಿಯಲ್ಲಿ ತೆರಳಿದ್ದರು. ರಾತ್ರಿ 11ರ ಸುಮಾರಿಗೆ ತೆರಳಿದ್ದ ಮೀನುಗಾರರು, ಡಿ.15ರ ರಾತ್ರಿ ಒಂದು ಗಂಟೆಯವರೆಗೂ ಇತರ ಮೀನುಗಾರರ ಜತೆ ಸಂಪರ್ಕದಲ್ಲಿದ್ದರು. ಆದರೆ, ಬಳಿಕ ದೋಣಿಯ ಜಿಪಿಎಸ್ ಕೂಡ ಸಂಪರ್ಕ ಕಳೆದುಕೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಮೀನುಗಾರರು ಎಲ್ಲಿದ್ದಾರೆ, ಅವರಿಗೆ ಏನಾಗಿದೆ ಎಂಬ ಸುಳಿವು ಸಿಕ್ಕಿಲ್ಲ. ಇದು ದೋಣಿಯಲ್ಲಿದ್ದ ಮೀನುಗಾರರು ಮತ್ತು ಅವರಕುಟುಂಬ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.
ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಮೀನುಗಾರರನ್ನು ಹಾಗೂ ದೋಣಿಯನ್ನು ಪತ್ತೆ ಹಚ್ಚಲುಯತ್ನಿಸಲಾಗುತ್ತಿದೆ.ದೋಣಿಯಲ್ಲಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚಂದ್ರಶೇಖರ, ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಇದ್ದರು.