ಹುಬ್ಬಳ್ಳಿ: 'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗಾಂಧಿ ಕುಟುಂಬದ ಮೇಲೆ ಆರೋಪ ಬರಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಘಮಂಡಿ ಘಟಬಂಧನ್ ನಾಯಕರನ್ನಾಗಿ ಮಾಡಲಾಗುತ್ತಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಐ.ಎನ್.ಡಿ.ಐ.ಎ ಒಕ್ಕೂಟಕ್ಕೆ ಅಸ್ತಿತ್ವವೇ ಇಲ್ಲ. ಕೇವಲ ಫೋಟೊಕ್ಕೆ ಸೀಮಿತವಾಗಿದ್ದು, ತೋರಿಕೆಯ ಘಟಬಂಧನ್ ಆಗಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಕೇರಳದಲ್ಲಿ ಜಗಳ ಆಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಕ್ಕೂಟದಿಂದ ಹೊರಬರುವ ವಿಚಾರ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಅಸಹಾಯಕ ಸ್ಥಿತಿಗೆ ಬಂದಿದೆ. ನಟ ಜಗ್ಗೇಶ್ ಬಾಷೆಯಲ್ಲಿ ಹೇಳುವುದಾದರೆ, ಕಾಂಗ್ರೆಸ್ ಢಮಾರ್ ಆಗೋದು ಗ್ಯಾರಂಟಿ. ಅದಕ್ಕಾಗಿಯೇ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನಾಯಕರನ್ನಾಗಿ ಮಾಡಿ ಬಲಿಪಶು ಮಾಡಲು ಮುಂದಾಗಿದ್ದಾರೆ' ಎಂದು ಟೀಕಿಸಿದರು.
ಹಾವೇರಿಯ ಹಾನಗಲ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವ ಜೋಶಿ, 'ತನಿಖೆಯಲ್ಲಿ ಸರ್ಕಾರದ ವೈಫಲ್ಯತೆ ಮತ್ತು ತುಷ್ಟೀಕರಣ ರಾಜಕಾರಣ ಎದ್ದು ಕಾಣುತ್ತಿದೆ. ಸಂತ್ರಸ್ತೆಯೇ ದೂರು ನೀಡಿದಾಗಲೂ ಗೃಹ ಸಚಿವರು ನೈತಿಕ ಪೊಲೀಸ್ಗಿರಿಯಾಗಿದೆ ನಾವು ನೋಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ. ರಾತ್ರೋರಾತ್ರಿ ಸಂತ್ರಸ್ತೆಯನ್ನು ಸ್ಥಳಾಂತರಿಸಿ, ಪರಿಹಾರ ನೀಡುತ್ತಾರೆ. ಈ ಎಲ್ಲ ವಿದ್ಯಮಾನ ಗಮನಿಸಿದರೆ ಸರ್ಕಾರ ಯಾರನ್ನೋ ರಕ್ಷಿಸಲು ಯತ್ನಿಸುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ವಿಶೇಷ ತನಿಖಾ ತಂಡ ರಚನೆ ಮಾಡಿ, ದಕ್ಷ ಪೊಲೀಸ್ ಅಧಿಕಾರಿ ನೇಮಿಸಬೇಕು' ಎಂದು ಆಗ್ರಹಿಸಿದರು.
'ಇದೇ ಪ್ರಕರಣದಲ್ಲಿ ಬೇರೆ ಜಾತಿಯವರು ಭಾಗಿಯಾಗಿದ್ದರೆ ದೊಡ್ಡ ಗೊಂದಲವೇ ಏರ್ಪಡುತ್ತಿತ್ತು. ಆರೋಪಿಗಳಿಗೆ, ಅಪರಾಧಿಗಳಿಗೆ ಯಾವಾಗಲೂ ಜಾತಿ ಇರುವುದಿಲ್ಲ. ಸರ್ಕಾರ ಪ್ರಾಮಾಣಿಕ ತನಿಖೆ ನಡೆಸಿ, ತನ್ನ ನಿಯತ್ತು ಪ್ರದರ್ಶಿಸಿಸಲಿ' ಎಂದರು.
'ರಾಮಮಂದಿರ ಉದ್ಘಾಟನೆಗೆ ಎಲ್ಲ ಪಕ್ಷದ ಮುಖಂಡರಿಗೂ ಆಹ್ವಾನ ನೀಡಲಾಗಿದೆ. ಸಹಜವಾಗಿ ಬಂದುಬಿಟ್ಟಿದ್ದರೆ ಯಾವ ಸಮಸ್ಯೆ, ಚರ್ಚೆಯೂ ನಡೆಯುತ್ತಿರಲಿಲ್ಲ. ಅಯೋಧ್ಯೆಗೆ ಹೋದರೆ ಮತಗಳು ಹೋಗುತ್ತವೆ, ಹೋಗದಿದ್ದರೆ ಸಿಗುತ್ತವೆ ಎನ್ನುವ ಲೆಕ್ಕಾಚಾರದ ರಾಜಕಾರಣದಿಂದ ಕಾಂಗ್ರೆಸ್ ಉದ್ಘಾಟನೆಗೆ ಬರದಿರಲು ನಿರ್ಧರಿಸಿದೆ. ಬಂದರೆ ಸಂತೋಷ, ಬಂದಿಲ್ಲವೆಂದರೆ ನಾವೇನು ತಲೆ ಕೆಡೆಸಿಕೊಳ್ಳುವುದಿಲ್ಲ. ಆದರೆ, ಜನರು ಪ್ರತಿಕ್ರಿಯಿಸುತ್ತಿದ್ದಾರೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.