ರಾಮನಗರ: ರಾಜ್ಯ ಸರ್ಕಾರ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದು, ಕೋವಿಡ್ ಪಾಸಿಟಿವ್ ಇರುವ ಅಧಿಕಾರಿಯನ್ನು ಬೇಕಂತಲೇ ನನ್ನ ಪರೀಕ್ಷೆಗೆ ಕಳುಹಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಪಾದಯಾತ್ರೆ ಮಾರ್ಗ ಮಧ್ಯೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಾದಯಾತ್ರೆ ನಿಲ್ಲಿಸಲು ಸರ್ಕಾರ ದೊಡ್ಡ ಸಂಚು ರೂಪಿಸಿದೆ. ಇದರ ಭಾಗವಾಗಿ ಶಿವಕುಮಾರ್ ಗೆ ಕೋವಿಡ್ ಪಾಸಿಟಿವ್ ಮಾಡಿಸಲು ಬೇಕಂತಲೇ ಆ ಅಧಿಕಾರಿಯನ್ನು ಕಳುಹಿಸಿದೆ. ಇದರ ಹಿಂದೆ ಆರೋಗ್ಯ ಹಾಗೂ ಗೃಹ ಸಚಿವರ ಕೈವಾಡ ಇದೆ ಎಂದು ದೂರಿದರು.
ನ್ಯಾಯಾಂಗ ತನಿಖೆ ನಡೆಸಿ: ಬಿಜೆಪಿಗೆ ಕೋವಿಡ್ ಕಲೆಕ್ಷನ್ ಕಡಿಮೆ ಆಗಿದ್ದು, ಹೀಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚು ತೋರಿಸಿ ಹಣ ಮಾಡಲು ಹೊರಟಿದೆ. ಇದರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವರ ಊರಿನಲ್ಲಿ ಇದೇ 3-4 ರಂದು ಕಾರ್ಯಕ್ರಮ ಮಾಡಿದ್ದಾರೆ. ಶಾಸಕ ರೇಣುಕಾಚಾರ್ಯ ಹೋರಿ ಬೆದರಿಸೋ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಹೀಗೆ ಬಿಜೆಪಿ ನಾಯಕರು ಯಾವುದೇ ಕಾರ್ಯಕ್ರಮ ಮಾಡಿದರೂ ಪ್ರಕರಣ ದಾಖಲಿಸಿಲ್ಲ. ಈಗ ನಮ್ಮ 31 ಮಂದಿ ಮೇಲೆ ಕೇಸ್ ಹಾಕಿದ್ದಾರೆ. ಇದರ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸರ್ಕಾರ ರಾಜಕೀಯಕ್ಕಾಗಿ ಕರ್ಫ್ಯೂ ಹೇರಿ ಜನರ ಪ್ರಾಣ ಕಳೆಯುತ್ತಿದೆ ಎಂದು ದೂರಿದರು.
ಮೂರು ದಿನ ಮೌನ: ರಾಷ್ಟ್ರ ಮಟ್ಟದ ಮಾಧ್ಯಮಗಳನ್ನು ಸರ್ಕಾರ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದೆ. ಇದನ್ನು ಖಂಡಿಸಿ ಮುಂದಿನ ಮೂರು ದಿನ ಕಾಲ ನಾನು ಮೌನವಾಗಿ ಪಾದಯಾತ್ರೆ ನಡೆಸಲಿದ್ದೇನೆ. ಯಾವ ಮಾಧ್ಯಮದವರೊಂದಿಗೂ ಮಾತನಾಡುವುದಿಲ್ಲ ಎಂದರು.