‘ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 30ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯು ಸರ್ಕಾರದ ಪ್ರಯೋಜಕತ್ವದ್ದು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಆರೋಪಿಸಿದರು. ಇದೇ ವೇಳೆ ಡಿಕೆ ಶಿವಕುಮಾರ್ ಅವರ ಮೇಲೆ ವಾಗ್ದಾಳಿ ನಡೆಸಿದ ಎಚ್ಡಿಕೆ ‘ಅಧಿಕಾರ ಯಾರಪ್ಪನ ಆಸ್ತಿಯೂ ಅಲ್ಲ. ರಾಜಕೀಯದಲ್ಲಿ ಏಳು–ಬೀಳು ಇರುತ್ತದೆ. ಇದರಲ್ಲಿ ಅಸೂಯೆ ಏಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ಬಿಟ್ಟು ಕೊಟ್ಟು ಬಂದ ವಂಶ ನಮ್ಮದು. ಸಿಡಿ ಶಿವು ಅವರೇ ನಾವು ಅಧಿಕಾರಕ್ಕೋಸ್ಕರ ಹಂಬಲಿಸುವವರಲ್ಲ. ಎಲ್ಲ ಅಧಿಕಾರವನ್ನೂ ನಾವು ನೋಡಿ ಆಗಿದೆ. ನಾವು ಬೇಡ ಎಂದರೂ ಅಧಿಕಾರ ಬಂದಿದೆ; ಬೇಕು ಎಂದಾಗ ಉಳಿದುಕೊಂಡಿಲ್ಲ. ಆದರೆ, ಹುಡುಕಿಕೊಂಡು ಹೋಗಿಲ್ಲ’ ಎಂದು ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.