ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯ ಗೊತ್ತಿದ್ದರೂ ಪ್ರಜ್ವಲ್‌ಗೆ ಟಿಕೆಟ್‌ ಕೊಟ್ಟ ಬಿಜೆಪಿ: ಕೃಷ್ಣ ಬೈರೇಗೌಡ

Published 29 ಏಪ್ರಿಲ್ 2024, 14:40 IST
Last Updated 29 ಏಪ್ರಿಲ್ 2024, 14:40 IST
ಅಕ್ಷರ ಗಾತ್ರ

ಹಾವೇರಿ: ‘ಸಂಸದ ಪ್ರಜ್ವಲ್‌ ರೇವಣ್ಣನ ಪ್ರಕರಣವನ್ನು ‘ಸೆಕ್ಸ್‌ ಸ್ಕ್ಯಾಮ್‌’ ಎಂದು ಕರೆಯಬೇಡಿ. ಇದು ಅತ್ಯಾಚಾರಕ್ಕೆ ಸಮನಾದ ಪ್ರಕರಣ. ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ. ಇಷ್ಡು ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ಎಲ್ಲಿಯೂ ನಡೆದಿಲ್ಲ. ಇದರ ಬಗ್ಗೆ ಯಾಕೆ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾಯಕ ಮಹಿಳೆಯರ ದುರ್ಲಾಭ ಪಡೆದಿರುವ ಪ್ರಕರಣ ಇದಾಗಿದೆ. ‘ಪ್ರಜ್ವಲ್ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಆತನಿಗೆ ಟಿಕೆಟ್ ಕೊಡಬಾರದು’ ಎಂದು ಹಾಸನದ ಬಿಜೆಪಿ ಮುಖಂಡರೊಬ್ಬರು ಡಿಸೆಂಬರ್‌ನಲ್ಲೇ ಪತ್ರ ಬರೆದಿದ್ದರು. ಆದರೂ ಬಿಜೆಪಿಯವರು ಅವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಕುಟುಕಿದರು.

ಬಿಜೆಪಿಯವರಿಗೆ ಮಾನ, ಮರ್ಯಾದೆ ಇದೆಯಾ? ಹಿಂದೂ ಮಹಿಳೆಯರ ತಾಳಿಯ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ಇಷ್ಟೊಂದು ಹಿಂದೂ ಮಹಿಳೆಯರ ಮಾನಭಂಗವಾಗಿದೆ. ಹಲವು ಮನೆಗಳನ್ನು ಒಡೆದಿದ್ದಾರೆ, ಮಾಂಗಲ್ಯ ಕಿತ್ತುಕೊಂಡಿದ್ದಾರೆ. ಇದೆಲ್ಲ ಗೊತ್ತಿದ್ದರೂ ಹಾಸನಕ್ಕೆ ಬಂದು ಮೋದಿ ಭಾಷಣ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ಕೊಡುವ ಒಂದೊಂದು ಮತ ಮೋದಿಗೆ ಕೊಡುವ ಮತ ಎಂದು ಹೇಳಿಕೆ ನೀಡಿದ್ದಾರೆ. ಪ್ರಜ್ವಲ್‌ಗೆ ಮೋದಿಯವರು ನೇರವಾಗಿ ಬೆಂಬಲ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಎಸ್‌ಐಟಿ ಮಾಡಿದ್ದು ರಾಜಕೀಯ ಪ್ರೇರಿತ ಬಿಜೆಪಿಯವರು ಟೀಕಿಸುತ್ತಾರೆ. ಹಾಗಾದರೆ, ಈ ಪ್ರಕರಣ ಮುಚ್ಚಿ ಹಾಕಬೇಕಾ? ಇದರ ಬಗ್ಗೆ ಯಾಕೆ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ. ಮೋದಿಯವರ ಹತ್ತಿರ ಸಿಬಿಐ, ಜಾರಿ ನಿರ್ದೇಶನಾಲಯ ಎಲ್ಲವೂ ಇದೆ. ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಹೇಗೆ ಬಿಟ್ಟರು. ನೀರವ್ ಮೋದಿ, ಲಲಿತ್‌ ಮೋದಿ, ವಿಜಯ ಮಲ್ಯ ಹೊರದೇಶಕ್ಕೆ ಹೋಗಿದ್ದಾರೆ. ಅದೇ ರೀತಿ ಪ್ರಜ್ವಲ್‌ ಅವರನ್ನು ಹೊರಗಡೆ ಕಳುಹಿಸಿ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ದೇಶಕ್ಕೆ ಅವಮಾನ ಮಾಡುವ ಕೆಲಸವನ್ನು ಬಿಜೆಪಿ- ಜೆಡಿಎಸ್‌ನವರು ಮಾಡಿದ್ದಾರೆ ಎಂದು ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT