ಬೆಂಗಳೂರು: ‘ಸದನದಲ್ಲಿ ಉತ್ತರ ನೀಡುವ ಮುನ್ನ ಸಚಿವರು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡು ಬರುತ್ತಿಲ್ಲ’ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿಧಾನಪರಿಷತ್ತಿನಲ್ಲಿ ಆರೋಪ ಮಾಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬುಧವಾರ ಕೆಲವು ಪ್ರಶ್ನೆಗಳ ಉತ್ತರಕ್ಕೆ ಸಂಬಂಧಿಸಿ ಅರ್ಧಗಂಟೆಗೂ ಹೆಚ್ಚು ಚರ್ಚೆ ನಡೆಯಿತು. ಈ ಬಗ್ಗೆ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ‘ಒಂದೊಂದು ಪ್ರಶ್ನೆಗೂ ಇಷ್ಟು ಹೊತ್ತು ಚರ್ಚೆ ನಡೆಸಿದರೆ ಸದನ ನಡೆಸುವುದು ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸಚಿವರು ಸರಿಯಾಗಿ ಪೂರ್ವತಯಾರಿ ನಡೆಸಿ ಸದನಕ್ಕೆ ಬರುತ್ತಿಲ್ಲ. ಅಧಿಕಾರಿಗಳು ಚೀಟಿಯಲ್ಲಿ ಬರೆದು ಕೊಟ್ಟಿದ್ದನ್ನಷ್ಟೆ ಇಲ್ಲಿ ಓದುತ್ತಿದ್ದಾರೆ. ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗದ ಕಾರಣಕ್ಕೆ ಸಮಯ ವ್ಯರ್ಥವಾಗುತ್ತಿದೆ’ ಎಂದು ಆಯನೂರು ಮಂಜುನಾಥ್ ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ನ ಎಸ್.ಆರ್.ಪಾಟೀಲ, ‘ ಸಚಿವರು ಅಧಿಕಾರಿಗಳಿಂದ ವಿವರಣೆ ಪಡೆದಾದರೂ ಬರುತ್ತಾರೋ ಇಲ್ಲವೋ ಎಂದು ಸಂದೇಹ ಉಂಟಾಗುತ್ತಿದೆ’ ಎಂದರು.