ಭಾನುವಾರ ಮಧ್ಯಾಹ್ನ ಶವವನ್ನು ನದಿಯವರೆಗೂ ವಾಹನದಲ್ಲಿ ತರಲಾಯಿತು. ಬಳಿಕ ತೆಪ್ಪದಲ್ಲಿ ಇರಿಸಿ ನದಿಯನ್ನು ದಾಟಿಸಲು ಪ್ರಯತ್ನಿಸಲಾಯಿತು. ಮೊದಲ ಬಾರಿಗೆ ತೆಪ್ಪವು ಅಲುಗಾಡಿದ್ದರಿಂದ ಪುನಃ ದಡಕ್ಕೆ ತಂದು ತೆಪ್ಪವನ್ನು ಸರಿಪಡಿಸಿಕೊಂಡು, 2ನೇ ಬಾರಿಗೆ ಶವ ಸಾಗಿಸುವ ಯತ್ನ ನಡೆಸಲಾಯಿತು. ನದಿಯಲ್ಲಿ ನೀರು ಹರಿಯುವ ಮಟ್ಟ ಹೆಚ್ಚಳವಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೊಂದು ತೆಪ್ಪವನ್ನು ಸಿದ್ಧವಾಗಿಟ್ಟುಕೊಳ್ಳಲಾಗಿತ್ತು. ನದಿಯ ಮಧ್ಯ ಭಾಗಕ್ಕೆ ತೆರಳುತ್ತಿದ್ದಂತೆ ತೆಪ್ಪವು ಎಳೆದಾಡತೊಡಗಿದ್ದು, ತೆಪ್ಪದಲ್ಲಿದ್ದ ಸಂಬಂಧಿಕರು ಜೀವ ಬಿಗಿ ಹಿಡಿದು ಕೂಗಿಕೊಂಡರು. ಅಂಬಿಗನ ಧೈರ್ಯದಿಂದ ತೆಪ್ಪವು ದಡ ಸೇರಲು ಸಾಧ್ಯವಾಯಿತು. ಶವ ಸಂಸ್ಕಾರಕ್ಕಾಗಿ ಗ್ರಾಮಕ್ಕೆ ಬಂದಿದ್ದ ನೆಂಟರಿಷ್ಟರಲ್ಲಿ ಕೆಲವರು ಧೈರ್ಯಮಾಡಿ ತೆಪ್ಪದಲ್ಲಿ ಗ್ರಾಮಕ್ಕೆ ತೆರಳಿದರೆ, ಕೆಲವರು ದಡದಲ್ಲಿಯೇ ಶವಕ್ಕೆ ಅಂತಿಮ ನಮನ ಸಲ್ಲಿಸಿ ಹಿಂತಿರುಗಿದರು.