ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತಬ್ಧ ಚಿತ್ರ ವಿವಾದ: ಕೇರಳಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು– ಸಚಿವ ಸುನೀಲ್ ಕುಮಾರ್

Last Updated 23 ಜನವರಿ 2022, 10:34 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರುಲೇಡಿ ಹಿಲ್ ವೃತ್ತಕ್ಕೆ ಮಹರ್ಷಿ ನಾರಾಯಣ ಗುರು ಹೆಸರಿಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಾಗ ಕಾಂಗ್ರೆಸ್ವಿರೋಧ ವ್ಯಕ್ತಪಡಿಸಿದ್ದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮರೆತು ಬಿಟ್ಟಿದ್ದಾರೆಎಂದು ಕನ್ನಡ- ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ತೆಗೆದುಕೊಂಡ ನಿರ್ಣಯವನ್ನು ಕಾಂಗ್ರೆಸ್ ವಿರೋಧಿಸಿದ್ದರ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಆದರೆ, ಆ ಸಮಯದಲ್ಲಿ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದು ಏಕೆ? ನಾರಾಯಣ ಗುರುಗಳ ಬಗ್ಗೆ ನಿಮಗೆ ಆಗ ಗೌರವ ಇರಲಿಲ್ಲವೇ? ಕೇರಳ ಸರಕಾರ ಸೃಷ್ಟಿಸಿದ ತಪ್ಪನ್ನು ನೀವ್ಯಾಕೆ ಪೋಷಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಹಿಂದು ಮಹಾಪುರುಷರ ಬಗ್ಗೆ ನಿಮ್ಮ ಗೌರವ ಹಾಗೂ ಕಾಳಜಿ ಸಾಂದರ್ಭಿಕವಾಗಿರುತ್ತದೆ. ಎಲ್ಲಿ ರಾಜಕೀಯ ಲಾಭ ಸಿಗುತ್ತದೋ ಆ ಸಂದರ್ಭದಲ್ಲಿ ಮಾತ್ರ ಅನಾವರಣವಾಗುತ್ತದೆ. ನಿಮ್ಮ ಶಾಶ್ವತ ಪ್ರೀತಿ ಯಾರ ಕಡೆಗೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾದ ಅಗತ್ಯವಿಲ್ಲ ಎಂದು ಟೀಕಿಸಿದ್ದಾರೆ.

ಕೇಂದ್ರ ಸರಕಾರದ ವಿರುದ್ಧ ಅನಗತ್ಯ ಅಪಪ್ರಚಾರದ ಜತೆಗೆ ಸಮಾಜ ಒಡೆಯುವ ಕೃತ್ಯಕ್ಕೆ ಪ್ರೇರಣೆ ನೀಡುವುದಕ್ಕಾಗಿ ಮಹರ್ಷಿ ನಾರಾಯಣ ಗುರು ಸ್ಥಬ್ದ ಚಿತ್ರ ವಿಚಾರವನ್ನು ಕೇರಳದ ಕಮ್ಯುನಿಷ್ಟ್ ಸರಕಾರ ಬಳಸಿಕೊಳ್ಳುತ್ತಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಉರಿಯುವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ಗೆ ಸ್ಥಬ್ದಚಿತ್ರಗಳನ್ನು ಆಯ್ಕೆ ಮಾಡುವುದು ಕೇಂದ್ರ ಸರಕಾರವಲ್ಲ. ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿ ಸ್ಥಬ್ದಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಕೇರಳ ಸರಕಾರ ವಿವಾದ ಸೃಷ್ಟಿಸಬೇಕೆಂಬ ಉದ್ದೇಶದಿಂದಲೇ ನಿಯಮ ಉಲ್ಲಂಘಿಸಿ ಜಟಾಯು, ಮಹರ್ಷಿ ನಾರಾಯಣಗುರು ಹಾಗೂ ಶಂಕರಾಚಾರ್ಯರನ್ನು ವಿವಾದದಲ್ಲಿ ಎಳೆದು ತಂದಿದೆ. ನಿಯಮ ಉಲ್ಲಂಘನೆ ಮಾಡಿದ ಕೇರಳದ ಕಮ್ಯುನಿಷ್ಟ್ ಸರಕಾರ ಈಗ ಈ ವಿಚಾರವನ್ನು ಸಮಾಜವನ್ನು ಒಡೆಯುವುದಕ್ಕೆ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.

ಕೇರಳ ರಾಜ್ಯ ಸೃಷ್ಟಿಸಿದ ವಿವಾದದ ಕೂಸನ್ನು ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎತ್ತಿ ಆಡಿಸುತ್ತಿದ್ದಾರೆ. ಸಮಾಜವನ್ನು ಜಾತಿ- ಧರ್ಮದ ಆಧಾರದ ಮೇಲೆ ಒಡೆಯುವ ಕೆಲಸದಲ್ಲಿ ಸಿದ್ದರಾಮಯ್ಯ "ಉನ್ನತ ಪದವಿ" ಪಡೆದಿದ್ದಾರೆ. ಹೀಗಾಗಿ ನಾರಾಯಣ ಗುರುಗಳನ್ನೂ ತಮ್ಮ‌ ಕ್ಷುಲಕ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮೌಢ್ಯ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ನಾರಾಯಣ ಗುರುಗಳು ಸಮಾಜದಲ್ಲಿರುವ ಕಂದರಗಳನ್ನು ಹೋಗಲಾಡಿಸಿ ಎಲ್ಲರನ್ನೂ ಬೆಸೆಯುವ ಕೆಲಸ ಮಾಡಿದ್ದರು. ಆದರೆ ಕಮ್ಯುನಿಷ್ಟರು ಹಾಗೂ ಕಾಂಗ್ರೆಸಿಗರು ನಾರಾಯಣ ಗುರುಗಳ ಹೆಸರನ್ನು ಸಮಾಜ ವಿಭಜನೆಗೆ ಬಳಸುತ್ತಿದ್ದಾರೆ. ಶಾಂತಿಯಿಂದ ನೆಲೆಸಿರುವ ಸಮಾಜದಲ್ಲಿ ಅಶಾಂತಿಯ ಕಿಡಿ ಹೊತ್ತಿಸುವುದಕ್ಕೆ ಮಹಾಪುರುಷರ ಹೆಸರನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರದಲ್ಲಿರಲಿ, ಪ್ರತಿಪಕ್ಷದಲ್ಲಿ ಇರಲಿ ಸಿದ್ದರಾಮಯ್ಯನವರ ಉದ್ದೇಶ ಮಾತ್ರ ಸಮಾಜವನ್ನು ಛಿದ್ರಗೊಳಿಸುವುದೇ ಆಗಿದೆ. ಸಿಕ್ಕ ಪ್ರತಿಯೊಂದು ಅವಕಾಶವನ್ನೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದಕ್ಕೆ ಬಳಸಿಕೊಳ್ಳುವುದು ಅವರ ಜಾಯಮಾನವಾಗಿದೆ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ರಾಜ್ಯದಲ್ಲಿ " ವಿಷಮ ಸಮರಾಂಗಣ" ಸೃಷ್ಟಿಸಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಚುನಾವಣೆ ಗೆಲ್ಲುವುದಕ್ಕಾಗಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮದ ವಿವಾದ ಹುಟ್ಟು ಹಾಕಿದರು. ದೇಶವನ್ನು ಕಾಯುವ ಸೈನಿಕರ ಜಾತಿ ಹುಡುಕುವ ಸಣ್ಣತನ ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲೂ ಜಾತಿ ವಿಷ ಬೀಜಬಿತ್ತಿದರು. ಶಾದಿಭಾಗ್ಯ ಯೋಜನೆಯ ಮೂಲಕ ಧರ್ಮ-ಧರ್ಮದ ಮಧ್ಯೆ ದ್ವೇಷ ಸೃಷ್ಟಿಸಿದರು. ಟಿಪ್ಪು ಜಯಂತಿಯ ಮೂಲಕ ಹಿಂದು ಕಾರ್ಯಕರ್ತರ ನರಮೇಧಕ್ಕೆ ಪೋಷಣೆ ನೀಡಿದರು. ಈಗ ನಾರಾಯಣ ಗುರುಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಒಂದು ಸಮುದಾಯದ ಭಾವನೆ ಕೆಣಕುವುದು ನಿಮಗೆ ಶೋಭೆ ತರುತ್ತದೆಯೇ ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಸಿದ್ದರಾಮಯ್ಯನವರ ಮಾತಿನಲ್ಲಿ ಬೆಲ್ಲ, ಕೈಯಲ್ಲಿ ಕೋಲು"ಎಂಬ ಧೋರಣೆಯನ್ನು ಕರ್ನಾಟಕದ ಜನತೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದವರ ಭಾವನೆ ಕೆಣಕಿ ಸಮಾಜದಲ್ಲಿ ತ್ವೇಷಮಯ ವಾತಾವರಣ ನಿರ್ಮಿಸುವ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಟೀಕಿಸಿದ್ದಾರೆ.

ಗಣರಾಜ್ಯೋತ್ಸವದ ದಿನ ಮಹರ್ಷಿ ನಾರಾಯಣಗುರುಗಳ ಸ್ಥಬ್ದ ಚಿತ್ರದ ಮೆರವಣಿಗೆಯನ್ನು ರಾಜ್ಯದಲ್ಲಿ‌ ನಡೆಸುತ್ತೇವೆ ಎಂದು ಕೆಲ ಸಂಘಟನೆಗಳು ಕರೆ ನೀಡಿವೆ. ನಾರಾಯಣ ಗುರುಗಳ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಈ ನಡೆಯನ್ನು ಸ್ವಾಗತಿಸುತ್ತೇನೆ. ಸ್ಥಬ್ದ ಚಿತ್ರ ಮೆರವಣಿಗೆಗೆ ನಮ್ಮ ಕಡೆಯಿಂದ ಅಗತ್ಯವಿರುವ ಎಲ್ಲ ಸಹಕಾರವನ್ನು ಹೃದಯಪೂರ್ವಕವಾಗಿ ನೀಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಈ ಹೇಳಿಕೆಯ ಬಗ್ಗೆಯೂ ಸಿದ್ದರಾಮಯ್ಯನವರು ಆಕ್ಷೇಪ ಎತ್ತಬಹುದು. ಇಲ್ಲಿ ಸಹಕಾರ ನೀಡುವುದೇಕೆ, ದಿಲ್ಲಿಗೆ ಕಳುಹಿಸಿಕೊಡಿಎಂದು ಒಣ ವಾದ ಪ್ರತಿಪಾದಿಸಬಹುದು. ಆದರೆ,, ನಾರಾಯಣ ಗುರು ಸ್ಥಬ್ದಚಿತ್ರ ನಿರಾಕರಣೆಯ ಹಿಂದಿರುವುದು ಕೇರಳ ಸರಕಾರದ ಬೇಜವಾಬ್ದಾರಿತನ ಎಂಬುದನ್ನು ಅರ್ಥ ಮಾಡಿಕೊಂಡು ಸಿದ್ದರಾಮಯ್ಯನವರು ತಮ್ಮ ವಿತಂಡವಾದ ಸರಣಿಯನ್ನು ನಿಲ್ಲಿಸುವುದು ಸ್ವಸ್ಥ ಸಮಾಜದ ಹಿತದೃಷ್ಟಿಯಿಂದ ಕ್ಷೇಮ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT