ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯೇಂದ್ರ ದೊಡ್ಡ ಸೊನ್ನೆ: ಪ್ರದೀಪ್ ಈಶ್ವರ್ ಟೀಕೆ

Published 29 ಮೇ 2024, 15:39 IST
Last Updated 29 ಮೇ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ತಂದೆಯ ಕಾರಣಕ್ಕೆ ನಿಮಗೆ ಅಧಿಕಾರ ಸಿಕ್ಕಿದೆಯೇ ಹೊರತು ಅದನ್ನು ಬಿಟ್ಟರೆ ನೀವು ದೊಡ್ಡ ಸೊನ್ನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ಬಗ್ಗೆ ಮಾತನಾಡುವ ಬದಲು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಲಿ’ ಎಂದರು.

‘ರಾಜ್ಯದ ಭವಿಷ್ಯವನ್ನು ಕಟ್ಟುವಂಥ ಚರ್ಚೆ ನಡೆಸೋಣ. ಅದನ್ನು ಬಿಟ್ಟು ತೇಜೋವಧೆ ಮಾಡುವ ರಾಜಕಾರಣ ಬೇಡವೆಂದು ವಿಜಯೇಂದ್ರ ಅವರಿಗೆ ಸಲಹೆ ನೀಡುತ್ತೇನೆ’ ಎಂದು ಹೇಳಿದರು. 

‘ಶಿವಮೊಗ್ಗದ ಇತಿಹಾಸದಲ್ಲಿ ಬಂಗಾರಪ್ಪ ಮತ್ತು ಯಡಿಯೂರಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮೀಣ ಕೃಪಾಂಕದ ಮೂಲಕ ಹಳ್ಳಿ ಯುವಕರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಬಂಗಾರಪ್ಪ‌. ಯಾರೋ ಒಬ್ಬರು ಚೋಟಾ ಸಹಿ ಹಾಕಿದ ಕಾರಣಕ್ಕೆ ಯಡಿಯೂರಪ್ಪ ಅವರು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಈ ಚೋಟಾ ಸಹಿ ಹಾಕಿದವರು ಯಾರು’ ಎಂದು ಪ್ರಶ್ನಿಸಿದರು.

‘ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹಿರಿಯ ನಾಯಕರ ವಿರುದ್ಧ ಮಾತನಾಡಿದರೆ ಪಕ್ಷದಿಂದಲೇ ಕಿತ್ತು ಹಾಕಲಾಗುತ್ತದೆ. ಆದರೆ, ಬಿಜೆಪಿಯಲ್ಲಿ ಬಾಯಿಗೆ ಬಂದಂತೆ ಬೈದುಕೊಂಡು ಓಡಾಡಬಹುದು. ಈಶ್ವರಪ್ಪ, ಯತ್ನಾಳ್ ಮಾತನಾಡುತ್ತಲೇ ಇದ್ದಾರೆ. ಅವರ ವಿರುದ್ಧ ಮೊದಲು ಕ್ರಮ ತೆಗೆದುಕೊಳ್ಳಿ. ಧೈರ್ಯ ಇರುವುದು ಕುರ್ಚಿಗಲ್ಲ, ಅದರ ಮೇಲೆ ಕುಳಿತುಕೊಳ್ಳುವವರಿಗೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT