ಬೆಂಗಳೂರು: 6.98 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಹಾಗೂ 8.96 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಮಾರ್ಚ್ 1ರಿಂದ ದ್ವಿತೀಯ ಪಿಯು, 25ರಿಂದ ಮೊದಲ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಇದೇ ಮೊದಲ ಬಾರಿ ಮೂರು ಪರೀಕ್ಷಾ ಪದ್ಧತಿಯನ್ನು ಪರಿಚಯಿಸಲಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಜತೆಗೆ, ಫಲಿತಾಂಶ ತೃಪ್ತಿಕರವಾಗಿಲ್ಲದ ವಿದ್ಯಾರ್ಥಿಗಳೂ ಉಳಿದ ಎರಡು ಪರೀಕ್ಷೆಗಳಿಗೆ ಹಾಜರಾಗಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೊದಲ ಪರೀಕ್ಷೆ ಬರೆಯಲು ಸಾಧ್ಯವಾಗದವರು ಎರಡನೇ ಅಥವಾ ಮೂರನೇ ಪರೀಕ್ಷೆ ಬರೆಯಬಹುದು. ಮೊದಲ ಪರೀಕ್ಷೆಯ ಸಮಯದಲ್ಲೇ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶವಿದೆ. ಮೂರು ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕಗಳು ಬಂದಿರುತ್ತವೆಯೋ, ಅದೇ ಅಂಕಪಟ್ಟಿ ಪಡೆಯಬಹುದು. ಆಯಾ ಪರೀಕ್ಷೆಗಳು ಮುಕ್ತಾಯವಾದ ತಕ್ಷಣ ಅಂಕಪಟ್ಟಿ ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳು ಮೂರರಲ್ಲಿ ತಮಗೆ ಇಷ್ಟವಾದ ಅತ್ಯುತ್ತಮ ಅಂಕಪಟ್ಟಿ ಉಳಿಸಿಕೊಳ್ಳಬಹುದು ಎಂದು ಹೇಳಿದರು.
ಇದೇ ಮೊದಲ ಬಾರಿ ಖಾಸಗಿ ಅಭ್ಯರ್ಥಿಗಳಿಗೂ ಇತರೆ ವಿದ್ಯಾರ್ಥಿಗಳಿಗೆ ಪೂರೈಸುವ ಪ್ರಶ್ನೆಪತ್ರಿಕೆಗಳನ್ನೇ ನೀಡಲಾಗುವುದು. ಪ್ರತಿ ಪ್ರಶ್ನೆ ಪತ್ರಿಕೆಯೂ 80 ಅಂಕಗಳನ್ನು ಒಳಗೊಂಡಿರುತ್ತದೆ. ಉಳಿದ 20 ಅಂಕಗಳನ್ನು ಶಾಲಾ, ಕಾಲೇಜು ಹಂತದಲ್ಲೇ ಆಂತರಿಕ ಹಾಗೂ ಪ್ರಯೋಗ ಪರೀಕ್ಷೆಯ ಮೂಲಕ ನೀಡಲಾಗಿರುತ್ತದೆ. ಎರಡನ್ನೂ ಸೇರಿಸಿ ಅಂಕಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದರು.
ದ್ವಿತೀಯ ಪಿಯು ಪರೀಕ್ಷೆಗೆ ಹೆಸರು ನೋಂದಾಯಿಸಿದವರಲ್ಲಿ 3.67 ಲಕ್ಷ ವಿದ್ಯಾರ್ಥಿನಿಯರು, 3.30 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಎಸ್ಎಸ್ಎಲ್ಸಿಯಲ್ಲಿ 4.58 ಲಕ್ಷ ವಿದ್ಯಾರ್ಥಿಗಳು, 4.37 ಲಕ್ಷ ವಿದ್ಯಾರ್ಥಿನಿಯರು ಇದ್ದಾರೆ.
ಉಳಿದ ಎರಡು ಪರೀಕ್ಷೆಗಳನ್ನು ಏಪ್ರಿಲ್ ಹಾಗೂ ಮೇನಲ್ಲಿ ನಡೆಸಲಾಗುವುದು. ಪ್ರತಿ ಪರೀಕ್ಷೆಯು ಪೂರ್ಣಗೊಂಡ 15ರಿಂದ 20 ದಿನಗಳ ಒಳಗೆ ಫಲಿತಾಂಶ ನೀಡಿ, ಅಂಕಪಟ್ಟಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.