ಬೆಂಗಳೂರು: ಅರ್ಧದಲ್ಲೇ ಸ್ಥಗಿತಗೊಂಡಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಯಾವುದೇ ಬದಲಾವಣೆ ಇಲ್ಲದೆ ತಕ್ಷಣ ಪುನರಾರಂಭ ಮಾಡಿ ಪೂರ್ತಿಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಸೋಮವಾರ ಸಂಜೆ ತಮ್ಮನ್ನು ಭೇಟಿ ಮಾಡಿದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಅವರು ಈ ಸೂಚನೆ ನೀಡಿದ್ದಾರೆ.
ಶುಕ್ರವಾರದಿಂದಲೇ (ಆ.23) ವರ್ಗಾವಣೆ ಕೌನ್ಸೆಲಿಂಗ್ ಅನ್ನು ಪುನರಾರಂಭಿಸಲು ಸೂಚಿಸಿ ಎಲ್ಲ ಡಿಡಿಪಿಐಗಳಿಗೆ ಸೂಚನೆ ಕಳುಹಿಸಲಾಗಿದೆ.
ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿ ತಿದ್ದುಪಡಿಯನ್ನು ವಿಧಾನಮಂಡಲ ಅಧಿವೇಶನದಲ್ಲಷ್ಟೇ ಮಾಡಲು ಸಾಧ್ಯ. ಈಗಾಗಲೇ ಅರ್ಧದಷ್ಟು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ವರ್ಗಾವಣೆಗಳನ್ನು ತಕ್ಷಣದಿಂದಲೇ ಪುನರಾರಂಭಿಸಿ ಪೂರ್ಣಗೊಳಿಸಬೇಕು. ಮುಂದಿನ ಬಾರಿ ತಿದ್ದುಪಡಿಯೊಂದಿಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಸಬಹುದು ಎಂದು ಮುಖ್ಯಮಂತ್ರಿ ಸೂಚಿಸಿದರು ಎಂದು ನಿಯೋಗದಲ್ಲಿದ್ದ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಉಚಿತ ಪಿಯು ಅಂಕಪಟ್ಟಿ
ಪ್ರವಾಹದಿಂದ ಮನೆಗಳು ಕೊಚ್ಚಿಹೋಗಿ ದಾಖಲೆಗಳೂ ನಾಶವಾಗಿದ್ದು,ಅಂಕಪಟ್ಟಿ, ಇತರ ದಾಖಲೆಗಳಿಗಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಅಥವಾ ಉಪನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದರೆ ತಕ್ಷಣ ಅವರಿಗೆ ಉಚಿತವಾಗಿ ದ್ವಿಪ್ರತಿಯಲ್ಲಿ ದಾಖಲೆಗಳನ್ನು ನೀಡಲು ಸೂಚಿಸಲಾಗಿದೆ.
23ರವರೆಗೆ ಅವಕಾಶ: ನೆರೆ ಹಾವಳಿ ಸಂಭವಿಸಿದ ರಾಜ್ಯದ 17 ಜಿಲ್ಲೆಗಳಲ್ಲಿ ಪ್ರಥಮ ಪಿಯುಸಿ ತರಗತಿಗೆ ದಾಖಲಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಇದೇ 23ರವರೆಗೆ ಅವಕಾಶ ಕಲ್ಪಿಸಲಾಗಿದೆ.