ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಲು ನಿರಾಕರಿಸಿದ್ದ ಅಡ್ವಾಣಿ: ಖರ್ಗೆ

ಇಚ್ಛಾಶಕ್ತಿ, ಪ್ರಯತ್ನದಿಂದ 371 ವಿಶೇಷ ಸ್ಥಾನಮಾನ: ಖರ್ಗೆ
Published 20 ಫೆಬ್ರುವರಿ 2024, 14:00 IST
Last Updated 20 ಫೆಬ್ರುವರಿ 2024, 14:00 IST
ಅಕ್ಷರ ಗಾತ್ರ

ಬೀದರ್‌: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಕಲಂ 371(ಜೆ) ತಿದ್ದುಪಡಿಯಾಗಿ ಹತ್ತು ವರ್ಷ ಪೂರೈಸಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟು 52 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ಇತರೆ 13 ಸಂಘಟನೆಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದರಿಂದ ಕ್ರೀಡಾಂಗಣದಲ್ಲಿ ಹಾಕಿದ್ದ ಜರ್ಮನ್‌ ಟೆಂಟ್‌ ಸಂಪೂರ್ಣ ಭರ್ತಿಯಾಗಿತ್ತು. ಅನೇಕರು ಕ್ರೀಡಾಂಗಣದ ಪೆವಿಲಿಯನ್‌ನಲ್ಲಿ ಕುಳಿತು ಕಾರ್ಯಕ್ರಮ ಕಣ್ತುಂಬಿಕೊಂಡರು. ಮಧ್ಯಾಹ್ನ 1ಗಂಟೆಗೆ ವೇದಿಕೆಗೆ ಬಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೃಹತ್‌ ಹೂಮಾಲೆ ಹಾಕಿ, ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಖರ್ಗೆ, ಹಿಂದೆ ರಾಜ್ಯದಲ್ಲಿ ಎಸ್‌.ಎಂ.ಕೃಷ್ಣ, ಎನ್‌.ಧರ್ಮಸಿಂಗ್‌ ಅವರು ಸಿ.ಎಂ ಇದ್ದಾಗ ಅಂದಿನ ಕೇಂದ್ರದ ಬಿಜೆಪಿ ಸರ್ಕಾರದ ಬಳಿಗೆ ನಿಯೋಗ ಕರೆದೊಯ್ಯಲಾಗಿತ್ತು. ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಮಾಡಬೇಕೆಂದು ಮನವಿ ಸಲ್ಲಿಸಿದ್ದೆವು. ಆದರೆ, ಅಂದಿನ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿ ಅವರು ಅದನ್ನು ನಿರಾಕರಿಸಿದ್ದರು. ಆದರೆ, ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಯುಪಿಎ ಸರ್ಕಾರ ಬಂದ ನಂತರ ಸಂವಿಧಾನಕ್ಕೆ ತಿದ್ದುಪಡಿ ಮಾಡಿ, ಸೌಲಭ್ಯ ಕಲ್ಪಿಸಲಾಯಿತು. ಕಾಂಗ್ರೆಸ್‌ ಪಕ್ಷದ ಇಚ್ಛಾಶಕ್ತಿ, ಪ್ರಯತ್ನದಿಂದ ಇದಾಗಿದೆ ಎಂದು ನೆನಪಿಸಿದರು.

ನಾನು ಶಾಸಕನಾಗಿ ಒಂದು ವರ್ಷವಾಗಿತ್ತು. 2009ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಸೋನಿಯಾ ಗಾಂಧಿಯವರು ಹೇಳಿದ್ದರು. 371(ಜೆ) ತಿದ್ದುಪಡಿ ಮಾಡಿದರೆ ಚುನಾವಣೆಗೆ ನಿಲ್ಲುತ್ತೇನೆ ಎಂದು ಷರತ್ತು ಹಾಕಿದ್ದೆ. ಬಳಿಕ ಕೇಂದ್ರದಲ್ಲಿ ನಮ್ಮದೇ ಸರ್ಕಾರ ರಚನೆಯಾಯಿತು. ಸೋನಿಯಾ ಗಾಂಧಿಯವರು ಹಾಗೂ ನನ್ನ ಪ್ರಯತ್ನದಿಂದ ಲೋಕಸಭೆಯಲ್ಲಿ 404 ಸದಸ್ಯರ ಬೆಂಬಲದೊಂದಿಗೆ ಕಾನೂನಿಗೆ ತಿದ್ದುಪಡಿ ಮಾಡಲಾಯಿತು. ಯಾವುದೇ ಕೆಲಸ ಮಾಡುವಾಗ ಹಿಂದೆ ಮುಂದೆ ನೋಡಬಾರದು ಎಂದರು.

ನಾನು ಕೇಂದ್ರದಲ್ಲಿ ರೈಲ್ವೆ ಸಚಿವನಿದ್ದಾಗ ಬೀದರ್‌ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಬಂದು, ನಾಂದೇಡ್‌–ಬೆಂಗಳೂರು ರೈಲಿನ ಸಮಯ ಬದಲಿಸಬೇಕೆಂದು ಕೇಳಿದ್ದರು. ನಾನು ರೈಲಿನ ಸಮಯ ಬದಲಿಸಿದರೆ ನನ್ನ ನಂತರ ಬಂದವರು ಪುನಃ ಅದನ್ನು ಬದಲಿಸಬಹುದೆಂದು ಬೀದರ್‌–ಬೆಂಗಳೂರು ನಡುವೆ ಹೊಸ ರೈಲು ಬಿಟ್ಟಿದ್ದೆ ಎಂದು ತಿಳಿಸಿದರು.

ನನ್ನ 52 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನಿಂದಾದ ಎಲ್ಲ ಕೆಲಸ ಮಾಡಿದ್ದೇನೆ. ದೀರ್ಘಕಾಲ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಯಾವ ತತ್ವದ ಮೇಲೆ ನನಗೆ ನಂಬಿಕೆ ಇದೆಯೋ ಅದರ ಮೇಲೆ ನಂಬಿಕೆ ಇಟ್ಟು ಮುನ್ನಡೆಯುತ್ತಿರುವೆ. ಆರನೇ ತರಗತಿಯಲ್ಲಿದ್ದಾಗ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪೋಸ್ಟರ್‌ ಅಂಟಿಸುತ್ತಿದ್ದೆ. ಜನಬೆಂಬಲದಿಂದ ಬೆಳೆದಿದ್ದೇನೆ. ಮುಂದೆಯೂ ಜನರ ಒಳಿತಿಗೆ ಶ್ರಮಿಸುವೆ. ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಮೋದಿ ಸರ್ಕಾರ ಏನೂ ಕೆಲಸ ಮಾಡಿಲ್ಲ. ಸುಳ್ಳು ಹೇಳುವುದರಲ್ಲಿ ಕಾಲ ಕಳೆದಿದೆ. ನಾವು ಮಾಡಿದ್ದೆಲ್ಲ ಅವರು ಮಾಡಿದ್ದು ಎಂದು ಹೇಳುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ, ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ತಲಾ ₹15 ಲಕ್ಷ ಜಮೆ ಮಾಡುವೆ ಎಂದು ಹೇಳಿದ್ದರು. ಆದರೆ ಮಾಡಿಲ್ಲ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಜತೆಗೆ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದನ್ನು ರಕ್ಷಿಸುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

‘ಜನರ ಪ್ರೀತಿ, ಬೆಂಬಲದಿಂದ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮಿಸೋಣ’ ಸಚಿವ ರಹೀಂ ಖಾನ್‌ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ಖರ್ಗೆಯವರು ಬಡವರು, ಶೋಷಿತರು ಸೇರಿದಂತೆ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಡಿದ ರಾಜಕಾರಣಿ. ಸ್ವಸಾಮರ್ಥ್ಯದಿಂದ ಎತ್ತರಕ್ಕೆ ಬೆಳೆದಿದ್ದಾರೆ. ಕಾರ್ಮಿಕ ಮಂತ್ರಿಯಾಗಿ, ರೈಲ್ವೆ ಸಚಿವರಾಗಿ ರಾಜ್ಯಕ್ಕೆ ಅವರು ಕೊಟ್ಟ ಕೊಡುಗೆ ಹಲವು ಎಂದು ಹೇಳಿದರು.

ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್‌ ಮಾತನಾಡಿ, ಖರ್ಗೆಯವರು ಈ ನಾಡಿಗೆ, ರಾಷ್ಟ್ರಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂದರು.

ಮುಖಂಡ ಪುಂಡಲೀಕರಾವ್‌ ಮಾತನಾಡಿ, ದೇವರಾಜ ಅರಸು ಅವರ ಸಂಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಶಿಕ್ಷಣ ಸಚಿವರಾಗಿದ್ದರು. ಬಾಬಾ ಸಾಹೇಬರ ಆಶಯದಂತೆ ಕೆಲಸ ಮಾಡಿದ್ದರು ಎಂದು ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT