ಕೂಡ್ಲಿಗಿ (ಬಳ್ಳಾರಿ): ತಾಲ್ಲೂಕಿನ ನಿಂಬಳಗೆರೆಯ ರೈತ ಬಿ.ಎಂ.ವಾಗೀಶ್ ಒಂದೂವರೆ ಎಕರೆ ಹೊಲದಲ್ಲಿ ಟೊಮೆಟೊ ಬೆಳೆ ಕೊಳೆಯುತ್ತಿದ್ದರೆ, ಎರಡು ಎಕರೆಯ ದಾಳಿಂಬೆ ತೋಟ ನೀರಿಲ್ಲದೆ ಸಂಪೂರ್ಣ ಒಣಗುವ ಹಂತವನ್ನು ತಲುಪಿದೆ.
ನೀರಿನ ಕೊರತೆ ಕಾರಣ ಐದು ಎಕರೆ ದಾಳಿಂಬೆ ತೋಟದ ಪೈಕಿ ಮೂರು ಎಕರೆಯಲ್ಲಿ ಗಿಡಗಳನ್ನು ತೆಗೆದು, ಅದರಲ್ಲಿ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಬೆಳೆ ಬರುವ ಹೊತ್ತಿಗೆ ಬಂದ ಲಾಕ್ಡೌನ್ನಿಂದ ಬೆಲೆ ಕುಸಿದಿತ್ತು.
‘18 ಕೆ.ಜಿಯ ಬಾಕ್ಸ್ಗೆ ₹60ರಿಂದ 70 ಇದ್ದ ದರ ₹30ಕ್ಕೆ ಕುಸಿದಿದೆ. ಕಟಾವು ಕೂಲಿಯೂ ಸಿಗುತ್ತಿಲ್ಲ. ಹೊಲದಲ್ಲಿಯೇ ಉಳಿದ ಟೊಮೆಟೊ ಕೊಳೆಯುತ್ತಿದೆ. ಜಮೀನನ್ನು ಕಳೆ ಆವರಿಸುತ್ತಿದೆ’ ಎಂದು ವಾಗೀಶ್ ವಿಷಾದಿಸಿದರು.
‘ಎಂಟು ವರ್ಷಗಳ ಹಿಂದೆ ದಾಳಿಂಬೆ ಗಿಡಗಳನ್ನು ನಾಟಿ ಮಾಡಿದ್ದೆ. ಮಳೆ ಕೊರತೆ ಎರಡು ಕೊಳವೆ ಬಾವಿಯಲ್ಲೂ ನೀರು ಕಡಿ ಮೆಯಾದವು. ಗಿಡಗಳು ಫಸಲುಬಿಡುವ ಶಕ್ತಿಯನ್ನು ಕಳೆದುಕೊಂಡವು’ ಎಂದು ಹೇಳುತ್ತಾರೆ.
‘ಈಗ ಕೊಳವೆ ಬಾವಿಯಲ್ಲಿ ಸ್ವಲ್ಪ ನೀರಿದೆ. ಆದರೆ ಚೇತರಿಸಿಕೊಳ್ಳುವ ಸಾಮರ್ಥ್ಯ ದಾಳಿಂಬೆ ಗಿಡಗಳಿಗಿಲ್ಲ. ಅವುಗಳನ್ನೂ ತೆಗೆದು ಅಲ್ಪಾವಧಿ ಬೆಳೆ ಬೆಳೆಯುವ ಚಿಂತನೆ ಇದೆ’ ಎಂದು ತಿಳಿಸಿದರು.