ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ | ಜಗತ್ತಿನ ಸಂಭ್ರಮವೆಂಬಂತೆ ಬಿಂಬಿಸಲು ಯತ್ನ: ಸಾಹಿತಿ ಚಿನ್ನಸ್ವಾಮಿ

Published 21 ಜನವರಿ 2024, 13:13 IST
Last Updated 21 ಜನವರಿ 2024, 13:13 IST
ಅಕ್ಷರ ಗಾತ್ರ

ಕಲಬುರಗಿ: ‘ರಾಮ ಮಂದಿರ ಉದ್ಘಾಟನೆ ಇಡೀ ಜಗತ್ತಿನ ಸಂಭ್ರಮ ಎಂದು ಬಿಂಬಿಸುತ್ತಿರುವುದು ಆಶ್ಚರ್ಯವಾಗುತ್ತಿದೆ. ರಾಜಸ್ಥಾನದಲ್ಲಿ ರಾಮಮಂದಿರಕ್ಕೆ ದಲಿತರೊಬ್ಬರು ಹಣ ಕೊಟ್ಟರೆ ಬೇಡ ಎಂದಿದ್ದಾರೆ. ಇಂಥವು ಘಟನೆಗಳೇ ಅಲ್ಲ ಎನ್ನುವ ರೀತಿ ದಲಿತರೂ ಭಾಗವಹಿಸಿದ್ದಾರೆ‘ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಸಮುದಾಯ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಸಂವಿಧಾನ ದುರಿತ ಕಾಲದಲ್ಲಿ ಮತ್ತೆ ಕವಿಮಾರ್ಗ’ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಇದು ಜಾತಿ, ಅಸ್ಪೃಶ್ಯತೆ ಇರುವ ಧರ್ಮ. ಮಂತ್ರಿಗಳು ಅಕ್ಷತೆ ಕೊಡುತ್ತಿದ್ದಾರೆ. ಧರ್ಮದಿಂದಲೇ ತಾರತಮ್ಯಕ್ಕೆ ಪ್ರೇರಣೆ ಸಿಗುತ್ತಿದೆ’ ಎಂದರು.

‘ಈಗ ಸಂವಿಧಾನವನ್ನು ಮೆಚ್ಚುತ್ತಲೇ ಮರೆಮಾಚುವುದನ್ನು ಕಲಿತ ಸರ್ಕಾರ ಅಧಿಕಾರದಲ್ಲಿದೆ. ಎಲ್ಲೆಲ್ಲೂ ಹಿಂದುತ್ವದ ಭರಾಟೆ ರಾಚುತ್ತಿದೆ. ಒಂದು ಟ್ರಸ್ಟ್‌ ಮಾಡಬಹುದಾದ ಕೆಲಸವನ್ನು ಇಡೀ ದೇಶವೇ ಮಾಡುತ್ತಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಸಾಂವಿಧಾನಿಕ ಅಧಿಕಾರಿ ಅಲ್ಲಿ ಇರುವುದೇ ಅಸಾಂವಿಧಾನಿಕ. ಕೆಲವೇ ಜನಗಳು ಬಹುಸಂಖ್ಯಾತರ ಮೇಲೆ ಹಿಡಿತ ಸಾಧಿಸುವುದೇ ಹಿಂದುತ್ವ ಎಂದು ಅಂಬೇಡ್ಕರ್ ಹೇಳಿದ್ದರು’ ಎಂದು ತಿಳಿಸಿದರು.

‘ಮೇಲ್ಜಾತಿಯವರು, ಅದನ್ನು ಅನುಷ್ಠಾನಗೊಳಿಸುತ್ತಿರುವವರ ಕೈಯಲ್ಲಿ ಅಧಿಕಾರ, ಸಂಪತ್ತು ಇರುವುದರಿಂದ ಇಷ್ಟು ಆರ್ಭಟ ನಡೆಯುತ್ತದೆ. ಮೇಲ್ಜಾತಿಯ ಪಾಪಪ್ರಜ್ಞೆ, ಕೆಳ ಜಾತಿಗಳ ಜಾಗೃತ ಪ್ರಜ್ಞೆಗಳು ಒಂದೇ ಬಿಂದುವಿನಲ್ಲಿ ಒಂದಾದಾಗ ಸಾಮಾಜಿಕ ಸಮಾನತೆ ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT