ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಕಂಬಿ ಎಣಿಸಬೇಕಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ ನೀಡಿರುವ ಹೇಳಿಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿದೆ.
ಈಗ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರು, ‘ಎಂ.ಬಿ ಪಾಟೀಲ ಅವರಿಗೆ ಸೂಲಿಬೆಲೆಯವರಿಂದ ಕಂಬಿ ಎಣಿಸುವ ಉಮೇದು, ಪ್ರಿಯಾಂಕ ಖರ್ಗೆ ಅವರಿಗೆ ಸಂಘ- ಪರಿವಾರ ನಿಷೇಧಿಸುವ ತವಕ’ ಎಂದು ವ್ಯಂಗ್ಯವಾಡಿದ್ದಾರೆ.
‘ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸಂಘ- ಪರಿವಾರ ನಿಷೇಧಿಸುವ ತವಕ, ಸಚಿವ ಎಂ.ಬಿ ಪಾಟೀಲ ಅವರಿಗೆ ಚಕ್ರವರ್ತಿ ಸೂಲಿಬೆಲೆಯವರಿಂದ ಕಂಬಿ ಎಣಿಸುವ ಉಮೇದು, ಇನ್ನು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಗಂತೂ ಗೋವಧೆ ಮಾಡುವ ಬಗ್ಗೆ ಅತ್ಯುತ್ಸಾಹ. ಕಾಂಗ್ರೆಸ್ ಆಡಳಿತದ ವೈಖರಿ ನೋಡಿ. ಯಾರಿಗೆ ಯಾವುದು ಸಂಬಂಧವಿಲ್ಲವೋ ಅದನ್ನು ಮಾಡಲು ಅತ್ಯುತ್ಸಾಹ’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಟ್ವೀಟ್ ಮೂಲಕ ತಿವಿದಿದ್ದಾರೆ.
ಮುಂಗಾರು ದುರ್ಬಲವಾಗಿದೆ, ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಮೊದಲು ಈ ಬಗ್ಗೆ ಗಮನ ಹರಿಸಿ. ಪ್ರೀತಿಯ ಅಂಗಡಿ ತೆರೆಯುತ್ತೇನೆಂದು ಘೋಷಿಸಿ, ದ್ವೇಷದ ದುಖಾನು ಸ್ಥಾಪಿಸಬೇಡಿ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ನಿನ್ನೆಯಷ್ಟೇ ಬಿಜೆಪಿ ಸಂಸದ ಜಗ್ಗೇಶ್ ಅವರು ಚಕ್ರವರ್ತಿ ಸೂಲಿಬೆಲೆ ಬೆನ್ನಿಗೆ ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಎಂದು ಹೇಳಿದ್ದರು.