ಬೆಂಗಳೂರು: ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಪಿ. (52) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾಗಿರುವ ₹187 ಕೋಟಿ ಅವ್ಯವಹಾರವು ಕಾಂಗ್ರೆಸ್ನ ‘ಮಿಷನ್ ಕಮಿಷನ್’ಗೆ ತೆರೆ ಎಳೆದಿದೆ’ ಎಂದು ಲೇವಡಿ ಮಾಡಿದ್ದಾರೆ.
‘ಅಹಿಂದ ಪರ ಎಂದು ಭಾಷಣ ಬಿಗಿಯುವ ಇವರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕಲ್ಲು ಹಾಕುವುದಲ್ಲದೇ, ಅಭಿವೃದ್ಧಿ ನಿಗಮದಿಂದ ಕೊಳ್ಳೆ ಹೊಡೆದು, ಅಲ್ಲಿನ ಅಮಾಯಕ ಅಧಿಕಾರಿಯೊಬ್ಬರು ಆತ್ಮಹತ್ಯೆಗೀಡಾಗುವಂತೆ ಮಾಡಿರುವುದು ದೌರ್ಭಾಗ್ಯ. ಈ ಪರಿಯ ಅವ್ಯವಹಾರ ಇಲಾಖೆಯ ಸಚಿವರ ಮೂಗಿನಡಿಯಲ್ಲೇ ನಡೆದರೂ ಅವರಿಗೆ ಅರಿವಿಲ್ಲ ಎಂಬುದು ಹಾಸ್ಯಾಸ್ಪದ ಹಾಗೂ ನಂಬಲಸಾಧ್ಯ. ಬಿ.ನಾಗೇಂದ್ರ ಅವರನ್ನು ವಜಾಗೊಳಿಸಿ, ಪಾರದರ್ಶಕ ತನಿಖೆ ಈ ಕೂಡಲೇ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚಂದ್ರಶೇಖರ್ ಅವರು ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ ಬಳಿಯಿರುವ ತಮ್ಮ ನಿವಾಸದಲ್ಲಿ ಭಾನುವಾರ ಸಂಜೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಇದೀಗ ಬಿಜೆಪಿ–ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.