ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ಗೆ ಜೂ. 3 ರಂದು ನಡೆಯಬೇಕಿದ್ದ ಚುನಾವಣೆಗೆ ನಾಮ ಪತ್ರ ಸಲ್ಲಿಸಿರುವ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಿಸಿದ್ದಾರೆ.
ಬಿಜೆಪಿಯ ಲಕ್ಷ್ಮಣ ಸವದಿ, ಕೇಶವಪ್ರಸಾದ್, ಟಿ.ನಾರಾಯಣಸ್ವಾಮಿ ಮತ್ತು ಹೇಮಲತಾ ನಾಯಕ್, ಕಾಂಗ್ರೆಸ್ನ ಕೆ.ಅಬ್ದುಲ್ ಜಬ್ಬಾರ್ ಮತ್ತು ಎಂ.ನಾಗರಾಜು ಯಾದವ್, ಜೆಡಿಎಸ್ನ ಟಿ.ಎ.ಶರವಣ ಅವರು ಆಯ್ಕೆಯಾಗಿದ್ದಾರೆ.
ಇದೇ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಮೇ 25 ರಂದು ಪರಿಶೀಲನೆ ಹಾಗೂ ಮೇ 27 (ಶುಕ್ರವಾರ) ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. ಏಳು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದ್ದರು. ಹೀಗಾಗಿ ಅವಿರೋಧ ಆಯ್ಕೆಯನ್ನು ಪ್ರಕಟಿಸಿ, ಆಯ್ಕೆಯ ಪ್ರಮಾಣ ಪತ್ರವನ್ನು ವಿತರಿಸಿದರು.