ಬಾಗಲಕೋಟೆ: ‘ವಾರಕ್ಕೆ ಆಗುವಷ್ಟು ಬಟ್ಟೆ ತನ್ನಿ. ಇಲ್ಲಿ ಬಟ್ಟೆಗಳನ್ನು ತೊಳೆ ಯಲು ನೀರಿಲ್ಲ. ಊರಿಗೆ ಹೋದಾಗ ಅವನ್ನು ತೊಳೆದುಕೊಂಡು ಬನ್ನಿ. ಸಾಧ್ಯವಾದಷ್ಟೂ ಕಡಿಮೆ ನೀರು ಬಳಸಿ.’
ಜಿಲ್ಲೆಯಲ್ಲಿನ 20ಕ್ಕೂ ಹೆಚ್ಚು ಮೆಟ್ರಿಕ್ ನಂತರದ ವಸತಿನಿಲಯಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಕೆಲ ವಸತಿನಿಲಯಗಳ ವಿದ್ಯಾರ್ಥಿಗಳಿಗೆ ವಾರ್ಡನ್ಗಳು ಈ ರೀತಿ ಸಲಹೆ ನೀಡಿದ್ದಾರೆ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದ್ದು, ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 150ಕ್ಕೂ ಹೆಚ್ಚು ವಸತಿ ನಿಲಯಗಳಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.
ನಿತ್ಯಕರ್ಮಗಳಿಗೆ ನೀರು ಹೊಂದಿ ಸುವ ವಸತಿ ನಿಲಯಗಳ ಸಿಬ್ಬಂದಿ, ಬಟ್ಟೆ ತೊಳೆಯುವುದಕ್ಕೆ ನೀರು ಒದಗಿಸುವಲ್ಲಿ ಹೈರಾಣ ಆಗಿದ್ದಾರೆ. ಜಿಲ್ಲೆಯ ಮುಧೋಳದ ನಾಲ್ಕಕ್ಕೂ ಹೆಚ್ಚು ವಸತಿ ನಿಲಯಗಳಲ್ಲಿ ಕೊರೆಸಲಾಗಿದ್ದ ಕೊಳವೆಬಾವಿಗಳು ಬತ್ತಿವೆ. ನಗರಸಭೆ ಯಿಂದ ನಳದ ಸಂಪರ್ಕ ಪಡೆದರೂ ವಾರಕ್ಕೊಮ್ಮೆ ನೀರು ಬರುತ್ತದೆ.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾದಾಮಿ ತಾಲ್ಲೂಕಿನ ಒಂದು, ಬಾಗಲಕೋಟೆಯ ನಾಲ್ಕು, ಮುಧೋಳ ತಾಲ್ಲೂಕಿನ ನಾಲ್ಕು ವಸತಿ ನಿಲಯಗಳಿಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಜಮಖಂಡಿಯ ಎರಡು ವಸತಿ ನಿಲಯಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲೂ ಇದೇ ಸ್ಥಿತಿ ಇದೆ.
ಮೂರೂ ಇಲಾಖೆಗಳಿಗೆ ಸೇರಿ 50ಕ್ಕೂ ಹೆಚ್ಚು ವಸತಿ ನಿಲಯಗಳಲ್ಲಿನ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಕೆಲವೆಡೆ ಅದರಲ್ಲೇ ನಿರ್ವಹಿಸಿದರೆ, ಕೆಲವೆಡೆ ಟ್ಯಾಂಕರ್ಗಳ ಮೊರೆ ಹೋಗಲಾಗಿದೆ. ಇಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಯಿಸಲು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಮುಂದೆ ಪ್ರಸ್ತಾವ ಸಲ್ಲಿಸಲಾಗಿದೆ.
ಅಸಹಾಯಕತೆ: ಜಿಲ್ಲೆಯ ಹಾಲಿಗೇರಿ, ಕುಳಗೇರಿ ಕ್ರಾಸ್, ರಡ್ಡೇರ ತಿಮ್ಮಾಪುರ ಸೇರಿ ಹಲವೆಡೆ ವಸತಿ ನಿಲಯಗಳಲ್ಲಿ ಮೂರಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆದರೂ ನೀರು ಬಂದಿಲ್ಲ. ಗ್ರಾಮ ಪಂಚಾಯಿತಿಗಳಿಂದ ನಳದ ಸಂಪರ್ಕ ಪಡೆದು ನೀರು ಪಡೆಯಲಾಗುತ್ತದೆ. ಆದರೂ, ಕೆಲವೆಡೆ ಮತ್ತೆ ಕೊಳವೆಬಾವಿ ಕೊರೆಯಿಸುವಂತೆ ಮನವಿ ಮಾಡಲಾಗಿದೆ.