ಬೆಂಗಳೂರು: ‘ಕೇಂದ್ರದ ಜತೆ ಸಂಘರ್ಷಕ್ಕೆ ಇಳಿದಿಲ್ಲ. ಆದರೆ, ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಕೇಳಿದ್ದೇವೆ. ಇದು ತಪ್ಪೇ? ಇದನ್ನೂ ಮಾಡದಿದ್ದರೆ, ಕರ್ನಾಟಕಕ್ಕೆ ದ್ರೋಹ ಮಾಡಿದಂತೆ ಆಗುವುದಿಲ್ಲವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಮಂಗಳವಾರ ಸುದೀರ್ಘ ಉತ್ತರ ನೀಡಿದ ಅವರು, ‘ನಮ್ಮ ಆಕ್ಷೇಪ ಇರುವುದು ನಮ್ಮ ಪಾಲಿನ ಹಣಕೊಟ್ಟಿಲ್ಲ ಎನ್ನುವುದು. ಇದನ್ನು ನೀವು ಸಂಘರ್ಷ ಎನ್ನುತ್ತೀರಿ. ನಾವು ಸಂಘರ್ಷ ಮಾಡುವುದಿಲ್ಲ. 7 ಕೋಟಿ ಕನ್ನಡಿಗರಿಗೆ ಅನ್ಯಾಯ ಆದಾಗ ಕೇಳಲೇಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು. ‘ಮುಖ್ಯಮಂತ್ರಿ ಅವರ ಉತ್ತರ ಸುಳ್ಳುಗಳಿಂದ ಕೂಡಿದೆ’ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
‘ನಾವು ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿಲ್ಲ. ನಮ್ಮ ರಾಜ್ಯಪಾಲರು ಕೇರಳ ಮತ್ತು ತಮಿಳುನಾಡಿನ ರಾಜ್ಯಪಾಲರಂತೆ ವರ್ತಿಸಲಿಲ್ಲ. ಸರ್ಕಾರದ ಕಾರ್ಯಕ್ರಮ ಮತ್ತು ಮುನ್ನೋಟವನ್ನು ಮುಂದಿಟ್ಟಿದ್ದಾರೆ. ಸತ್ಯವನ್ನೇ ಹೇಳಿದ್ದಾರೆ. ಸಜ್ಜನಿಕೆಯಿಂದ ನಡೆದುಕೊಂಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ‘ನೀವು ಅವರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಂಡಿದ್ದೀರಿ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಛೇಡಿಸಿದರು.
‘ನಾವು ಸಂಘರ್ಷಕ್ಕೆ ಇಳಿದಿದ್ದೇವೆ, ನಮ್ಮ ಧೋರಣೆ ಸರಿ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಪಾಲಿನ ಹಣ ಬಂದಿಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಪ್ರಧಾನ ಮಂತ್ರಿ ಮತ್ತು ಇತರ ಸಚಿವರನ್ನೂ ಭೇಟಿ ಮಾಡಿದ್ದೇವೆ. ಆದರೂ ಹಣ ಬಂದಿಲ್ಲ. ಗೃಹಸಚಿವರಿಗೆ 17 ಪತ್ರಗಳನ್ನು ಬರೆದಿದ್ದು, ಒಂದಕ್ಕೆ ಮಾತ್ರ ಪ್ರತಿಕ್ರಿಯಿಸಿದ್ದು, ಉಳಿದವುಗಳಿಗೆ ಪ್ರತಿಕ್ರಿಯಿಸಿಲ್ಲ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
‘ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ ರಾಜ್ಯ ದಿವಾಳಿ ಆಗಿ ಹೋಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಕಳೆದ ಬಜೆಟ್ನಲ್ಲಿ ಗ್ಯಾರಂಟಿಗಾಗಿ ₹32 ಸಾವಿರ ಕೋಟಿ ಇಟ್ಟಿದ್ದೆವು. ಈ ಬಜೆಟ್ನಲ್ಲಿ ₹52 ಸಾವಿರ ಕೋಟಿ ಇಟ್ಟಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಮತ್ತು ಬಜೆಟ್ ಕುರಿತು ಪತ್ರಿಕೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದು ‘ಪ್ರಜಾವಾಣಿ’ ಮತ್ತು ಇತರ ಪತ್ರಿಕೆಗಳ ಸಂಪಾದಕೀಯಗಳನ್ನು ಉಲ್ಲೇಖಿಸಿದರು.
ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಬಜೆಟ್ ವರದಿಯ ಕುರಿತ ಪತ್ರಿಕಾ ವರದಿಗಳ ತಲೆ ಬರಹಗಳನ್ನೂ ಓದಿ, ‘ನೋಡಿ ಪತ್ರಿಕೆಗಳೇ ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದಾಗ, ‘ನಿಮ್ಮ ಬಜೆಟ್ ಕುರಿತ ವರದಿಗಳನ್ನೇ ಮೆಚ್ಚುಗೆ ಎಂದರೆ ಹೇಗೆ? ಸಿದ್ದರಾಮಯ್ಯ ಹಿಂದೆ ಎಂದೂ ತಮ್ಮನ್ನು ಸಮರ್ಥಿಸಿಕೊಳ್ಳಲು ಪತ್ರಿಕಾ ವರದಿಗಳ ನೆರವಿಗೆ ಹೋಗಿದ್ದು ನೋಡಿಲ್ಲ. ಈಗ ಯಾವ ಸ್ಥಿತಿಗೆ ತಲುಪಿದ್ದೀರಿ ಎನ್ನುವುದು ಅರ್ಥವಾಗುತ್ತದೆ’ ಎಂದು ಬೊಮ್ಮಾಯಿ ಕಾಲೆಳೆದರು.
‘ಕಳೆದ ಕೆಲವು ದಿನಗಳಿಂದ ಆರೋಗ್ಯ ಸರಿ ಇಲ್ಲದ ಕಾರಣ ವಿಧಾನಸಭೆಗೆ ಬರಲಿಲ್ಲ. ವಿಧಾನ ಪರಿಷತ್ತಿಗೂ ಹೋಗಿದ್ದು ಕಡಿಮೆ‘ ಎಂದು ಸಿದ್ದರಾಮಯ್ಯ ಹೇಳಿದಾಗ, ‘ನೀವು ಈ ಬಾರಿ ವಿಧಾನಸಭೆ ಕಲಾಪಕ್ಕೆ ಬರಲಿಲ್ಲ. ನಮ್ಮ ಯಾರ ಭಾಷಣಗಳನ್ನೂ ಕೇಳಲಿಲ್ಲ’ ಎಂದು ಬೊಮ್ಮಾಯಿ ತಿಳಿಸಿದರು.
‘ರಾಜ್ಯಪಾಲರ ಭಾಷಣ ಮತ್ತು ಬಜೆಟ್ ಮಂಡನೆಗಾಗಿ ಬಂದಿದ್ದೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮತಕ್ಕೆ ಹಾಕುವಾಗ ‘ಹೌದು’ ಎನ್ನುವವರು ‘ಹೌದು’ ಎನ್ನಿ, ‘ಇಲ್ಲ’ ಎನ್ನುವವರು ‘ಇಲ್ಲ’ ಎನ್ನಿ ಎಂದು ಹೇಳಿದಾಗ, ಕಾಂಗ್ರೆಸ್ ಸದಸ್ಯರೆಲ್ಲಾ ‘ಹೌದು’ ಎಂದು ಹೇಳಿದರೆ, ಸಿದ್ದರಾಮಯ್ಯ ಮಾತ್ರ ‘ಇಲ್ಲ’ ಎಂದು ಬಿಟ್ಟರು. ಸದನದಲ್ಲಿದ್ದ ಸಚಿವರು, ಆಡಳಿತ ಪಕ್ಷದ ಸದಸ್ಯರು ಒಂದು ಕ್ಷಣ ಆವಾಕ್ಕಾದರು.
ಬಿಜೆಪಿಯದು ದ್ವೇಷ ತುಂಬಿದ ತುಕ್ಕು ಹಿಡಿದ ಬಸ್ಸು ವಿಷದ ಹೊಗೆಯನ್ನು ಉಗುಳುತ್ತದೆ. ಕಳೆದ ಚುನಾವಣೆಯಲ್ಲಿ ಆ ಬಸ್ಸು ಮುಂದೆ ಹೋಗಲೇ ಇಲ್ಲ. ಜನ ಆ ಬಸ್ಸನ್ನು ಪಕ್ಕಕ್ಕೆ ತಳ್ಳಿದರು.ಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.