ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಸರ್ಕಾರದ ಹಲವು ಹುದ್ದೆಗಳಿಗೆ ಸೇರಬಹುದಾದ ಸುಲಭ ಅವಕಾಶ ಇದ್ದರೂ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲದಲ್ಲಿ ಹೈನುಗಾರಿಕೆ ಪ್ರಾರಂಭಿಸಿದವರು ಗದಗ ಜಿಲ್ಲೆಯ ಮುಳಗುಂದದ ಮಂಗಳಾ ನೀಲಗುಂದ. ಬಿಎಸ್ಸಿ ಕೃಷಿ ಪದವೀಧರೆಯಾಗಿರುವ ಅವರು ಕುಟುಂಬ ಮತ್ತು ಕೃಷಿ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಲೇ ವರ್ಷಕ್ಕೆ ₹8 ಲಕ್ಷದಿಂದ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಕುರಿಗಳ ಮಾರಾಟಕ್ಕೆ ಸಾಮಾಜಿಕ ಜಾಲತಾಣಗಳ ವೇದಿಕೆ ಬಳಸಿಕೊಂಡು, ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಂಡಿದ್ದಾರೆ ಈ ರೈತ ಮಹಿಳೆ.