ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಪೂರ್ವಗ್ರಹದಿಂದ ಮುಕ್ತವಾಗದ ಬಜೆಟ್‌

Last Updated 15 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ
ADVERTISEMENT

ನಿನ್ನೆ ವಿಧಾನಸಭೆಯಲ್ಲಿ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಎಲ್ಲ ವರ್ಗದ ಮಹಿಳೆಯರ ಬದುಕಿನಲ್ಲಿ ಗಮನಾರ್ಹವಾದ ಬದಲಾವಣೆ­ಗಳನ್ನು ತರುವ ಸ್ಪಷ್ಟ ಸೂಚನೆಗಳು ಕಾಣುತ್ತಿಲ್ಲವಾದರೂ, ಕೆಲ ಯೋಜನೆಗಳು (ನಿಜವಾದ ಅರ್ಥದಲ್ಲಿ ಅನುಷ್ಠಾನ­ಗೊಂಡರೆ ಮಾತ್ರ), ಆಯ್ದ ಕೆಲ ಮಹಿಳಾ ಗುಂಪು­ಗಳಿಗೆ ನೆರವಾಗಬಹುದೇನೋ? ಒಟ್ಟು ಆಯವ್ಯಯ­ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ನಿಗದಿಯಾಗಿರುವ ಪಾಲು ಶೇಕಡ ೨.೭ರಷ್ಟು ಮಾತ್ರ.

ಆದರೆ ಈ ಹಂಚಿಕೆಯನ್ನು ಕೇವಲ ಸಂಖ್ಯಾತ್ಮಕ ದೃಷ್ಟಿಯಿಂದ ಅಳೆಯುವುದು ಸೂಕ್ತವಲ್ಲ. ನಿಜವಾದ ಅರ್ಥದಲ್ಲಿ ಲಿಂಗ ಸೂಕ್ಷ್ಮ ಬಜೆಟ್ ಎಂದರೆ ಪ್ರತಿ ಹಣಕಾಸು ಆಯವ್ಯಯ ಶೀರ್ಷಿಕೆಯಲ್ಲೂ ಮಹಿಳೆ­ಯರಿಗೆ ಪಾಲನ್ನು ನೀಡುವ ವ್ಯವಸ್ಥೆಯಾಗಬೇಕು.

ಈ ಬಾರಿಯ ಆಯವ್ಯಯದಲ್ಲಿ ಗುರುತಿಸಲಾಗಿರುವ ೪೫ ಪ್ರಧಾನ ಕ್ಷೇತ್ರಗಳಲ್ಲಿ ೮ರಲ್ಲಿ ಮಾತ್ರ, ವಹಿಳೆಯರಿಗಾಗಿ ಕೆಲ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ನನ್ನ ದೃಷ್ಟಿಯಲ್ಲಿ ಮುಖ್ಯವೆನಿಸುವುದು ಕೃಷಿ ಮತ್ತು ಉನ್ನತ ಶಿಕ್ಷಣ. ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರ ಕೊಡುಗೆ ಅತ್ಯಮೂಲ್ಯವಾದರೂ, ಸಾಮಾನ್ಯವಾಗಿ ರೈತ ಎನ್ನುವ ಪರಿಕಲ್ಪನೆಯೊಳಗೆ ಮಹಿಳೆಯರು ಸೇರುವುದಿಲ್ಲ. ರೈತ ಎಂದರೆ ಪುರುಷ, ಆತನ ಪತ್ನಿ, ತಾಯಿ, ಮಗಳು ಅಥವಾ ಕುಟುಂಬದ ಇತರ ಮಹಿಳಾ ಸದಸ್ಯರು ಅವಲಂಬಿಗಳು ಎಂಬ ಭಾವನೆಯೇ ಬಹು ಮಟ್ಟಿಗೆ ಪ್ರಚಲಿತವಾಗಿರುವ ಈ ವ್ಯವಸ್ಥೆಯಲ್ಲಿ ಮಹಿಳಾ ರೈತರಿಗೆ ಕಡಿಮೆ ದರದಲ್ಲಿ ಬೀಜ, ಗೊಬ್ಬರ ಮತ್ತು ಇತರ ಕೃಷಿಸಂಬಂಧಿ ವಸ್ತುಗಳನ್ನು ಒದಗಿಸಲು ಪ್ರಾಧಾನ್ಯ ನೀಡಬೇಕೆಂದು ಸೂಚಿಸಿರುವುದು ಗಮನಾರ್ಹ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬೋಧನಾ ಶುಲ್ಕ ಮತ್ತು ಪ್ರಯೋಗಾಲಯ ಶುಲ್ಕ­ಗಳನ್ನು ಮನ್ನಾ ಮಾಡ­ಬೇಕೆಂದು ಸೂಚಿಸಿರುವುದು ಒಂದು ಸಕಾರಾತ್ಮಕ ಹೆಜ್ಜೆ­ಯೇ ಸರಿ. ಏಕೆಂದರೆ ಇಂದಿಗೂ ಅನೇಕ ಕುಟುಂಬ­ಗಳಲ್ಲಿ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ, ಅದರಲ್ಲೂ ವಿಜ್ಞಾನ ನಿಕಾಯದ ಕೋರ್ಸು­ಗಳಿಗೆ ಕಳುಹಿಸಲು ಹಿಂಜರಿಯು­ತ್ತಿದ್ದಾರೆ. ಇಂಥ ವ್ಯವಸ್ಥೆಯಲ್ಲಿ ಬೋಧನಾ ಶುಲ್ಕವನ್ನು ಮನ್ನಾ ಮಾಡಿರುವುದು ಸರಿ. ಆದರೆ ಈ ಸೌಲಭ್ಯ ಕೇವಲ ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಜಾರಿಗೆ ಬರಬಹುದಷ್ಟೆ. ಆದರೆ ಶಿಕ್ಷಣ ಹೆಚ್ಚು-ಹೆಚ್ಚು ಖಾಸಗಿ ಕ್ಷೇತ್ರದ ಕೈಗೆ ಜಾರುತ್ತಿರುವಾಗ ಈ ಯೋಜನೆ ಎಷ್ಟರ ಮಟ್ಟಿಗೆ ಕಾರ್ಯಗತವಾಗುವುದೋ ಕಾದು ನೋಡಬೇಕು. ಸ್ನಾತಕೋತ್ತರ ಶಿಕ್ಷಣಕ್ಕೆ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಈ ಹೊತ್ತಿನಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಅವರಿಗಾಗಿಯೇ ಮೀಸಲಾದ ವಿದ್ಯಾರ್ಥಿ­ನಿಲಯ­ಗಳನ್ನು ತೆರೆಯುವ ನಿರ್ಧಾರ ಕೂಡ ಸ್ವಾಗತಾರ್ಹ.

ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಉತ್ತೇಜಕ ಯೋಜನೆಗಳನ್ನು ರೂಪಿಸುವುದು ಸರಿಯೇ. ಆದರೆ ಪ್ರಾಥಮಿಕ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಹಾಗೂ ಶಾಲೆಯನ್ನು ಬಿಟ್ಟು ಬಿಡುವ ಮಕ್ಕಳನ್ನು ಶಾಲೆಗೆ ಮರುತರಲು ಯಾವುದೇ ವಿಶೇಷ ಪ್ರಯತ್ನ ಕಂಡು ಬರದಿರುವುದು ಆಶ್ಚರ್ಯ ತಂದಿದೆ.

ಮಹಿಳಾ ಸಶಕ್ತೀಕರಣಕ್ಕೆ ಅತ್ಯಂತ ಅಗತ್ಯ ಅಂಶವಾದ ಆರೋಗ್ಯ ರಕ್ಷಣೆಯ ವಿಚಾರದಲ್ಲೂ ಈ ಆಯವ್ಯಯ ಲಿಂಗಪೂರ್ವಗ್ರಹದಿಂದ ಮುಕ್ತವಾಗಿಲ್ಲವೆಂಬುದು ಸ್ಟಷ್ಟವಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮಡಿಲು ಕಿಟ್‌, ಪ್ರಸೂತಿ ಆರೈಕೆ ಯೋಜನೆಗಳಿಗೇ ಒತ್ತು ನೀಡಿರುವುದು ಮಹಿಳೆಯರ ಆರೋಗ್ಯದ ಪರಿಕಲ್ಪನೆಯನ್ನು ಸಂತಾನೋತ್ಪತಿಯ ಪಾತ್ರಕ್ಕೆ ಸೀಮಿತಗೊಳಿಸಿರುವುದು ಸ್ಪಷ್ಟವಾಗಿದೆ.

ಹೆಣ್ಣಿನ ಆರೋಗ್ಯದ ಪ್ರಮುಖ ಅಂಶಗಳಾದ ಪೌಷ್ಟಿಕತೆ, ಶುದ್ಧ ಕುಡಿಯುವ ನೀರು, ಆರೋಗ್ಯ ರಕ್ಷಕ ಸೇವೆಗಳ ಲಭ್ಯತೆ ಮುಂತಾದುವುಗಳಿಗೆ ಗಮನ ನೀಡಬೇಕಿತ್ತು. ಇದರ ಬದಲು ಮಹಿಳೆಯರಿಗಾಗಿ ೩೫ ವಿಶೇಷ ಘಟಕಗಳನ್ನು ಸ್ಥಾಪಿಸಿ ಇವುಗಳಲ್ಲಿ ವೈದ್ಯ­ಕೀಯ ಚಿಕಿತ್ಸೆ, ಕಾನೂನು ಮತ್ತು ಪೊಲೀಸ್ ನೆರವು ಪಡೆಯಲು ಅವಕಾಶವಿರುತ್ತದೆ ಎಂದು ಸೂಚಿಸಿ­ರುವುದು, ತೀರಾ ಅಸ್ಪಷ್ಟವಾದ ಒಂದು ನಿಲುವು.

ಹೆಣ್ಣು ಮಕ್ಕಳ/ಮಹಿಳೆಯರ ಆರೋಗ್ಯ ರಕ್ಷಣೆಗೆ ಪೂರಕವಾದ ಒಂದು ಯೋಜನೆಯೆಂದರೆ ೫೦ ತಾಲೂಕುಗಳಲ್ಲಿ ಸ್ಯಾನಿಟರ್ ನ್ಯಾಪ್‌ಕಿನ್ ತಯಾರಿಸುವ ಘಟಕಗಳನ್ನು ತೆರೆಯುವುದು. ಆದರೆ ರಾಜ್ಯದ ೧೭೬ ತಾಲೂಕುಗಳಲ್ಲೂ ಇದರ ಸಮರ್ಪಕ ವಿತರಣೆಗೆ ಅನುವು ಮಾಡಿಕೊಡುವಂಥ ವ್ಯವಸ್ಥೆ ಸೃಷ್ಟಿಯಾಗಬೇಕಷ್ಟೆ.

ಈ ಆಯವ್ಯಯದಲ್ಲಿ, ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳು ಅಂತರ್‌ಜಾತಿ ವಿವಾಹ ಮಾಡಿಕೊಂಡಾಗ ನೀಡುತ್ತಿದ್ದ ೫೦,೦೦೦ ರೂಪಾಯಿಗಳ ಪ್ರೋತ್ಸಾಹ ಧನವನ್ನು ಒಂದು ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೇಲ್ನೋಟಕ್ಕೆ ಇದು ಹೆಣ್ಣು ಮಕ್ಕಳಿಗೆ ಆರ್ಥಿಕ ಬೆಂಬಲ ನೀಡಿದಂತೆ ಕಂಡು ಬಂದರೂ, ಇದು ವರದಕ್ಷಿಣೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಶೋಷಿಸುವ ಮತ್ತೊಂದು ಅಸ್ತ್ರವಾಗಬಾರದು. ಆದರೆ ಇದರ ಜವಾಬ್ದಾರಿಯನ್ನು ತೆಗೆದು ಕೊಳ್ಳುವವರು ಯಾರು?

ಮಹಿಳೆಯರು ಪ್ರಧಾನ ಪಾತ್ರವಹಿಸುವ ಕ್ಷೇತ್ರಗಳಾದ ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಹುಳು ಸಾಕಣಿಕೆ, ಮೀನುಗಾರಿಕೆ, ಮುಂತಾದುವುಗಳಲ್ಲಿ ಮಹಿಳೆಯರಿಗಾಗಿ ಯಾವುದೇ ವಿಶೇಷ ಮಂಜೂರಾತಿ ಕಂಡು ಬರುತ್ತಿಲ್ಲ. ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ದುಡಿಮೆಗಾರರು ಕೆಲಸ ಮಾಡುವ ಅಸಂಘಟಿತ ಕಾರ್ಮಿಕ ಕ್ಷೇತ್ರದಲ್ಲೂ ಶ್ರಮ, ಉದ್ಯೋಗ ಮತ್ತು ತರಬೇತಿ ಶೀರ್ಷಿಕೆ­ಯಡಿಯಲ್ಲಿ ಅವರನ್ನು ಈ ಆಯವ್ಯಯ ಅಲಕ್ಷ ಮಾಡಿರುವುದು ಎದ್ದು ಕಾಣುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ವಸಹಾಯ ಗುಂಪುಗಳು ಮತ್ತು ಮಹಿಳಾ ಸಂಘಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಎರಡು ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಯಾವುದೇ ಸ್ಪಷ್ಟ ಉದ್ದೇಶಗಳನ್ನು ಹೊಂದದ ಇಂಥ ಕಾರ್ಯಕ್ರಮಗಳಿಗೆ ಹಣವನ್ನು ನಿಗದಿ ಪಡಿಸುವ ಬದಲು ಆಸಿಡ್ ದಾಳಿ ಮತ್ತು ಇತರ ಬಗೆಯ ಕೌಟುಂಬಿಕ ಮತ್ತು ಸಾರ್ವಜನಿಕ ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಲು ರೂಪಿತವಾಗಿರುವ ಕಾನೂನುಗಳ ಅನುಷ್ಠಾನಕ್ಕೆ ಅಗತ್ಯವಾದ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಲು ಈ ಆಯವ್ಯಯದಲ್ಲಿ ಸ್ಪಷ್ಟ ಮಂಜರಾತಿ ನೀಡಬೇಕಿತ್ತು. ರಾಜ್ಯದಲ್ಲಿ ಇನ್ನೂ ಹತ್ತು ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲು ಅವಕಾಶ ಮಾಡಿ­ಕೊಟ್ಟಿ­ರುವುದು ಮೇಲ್ನೋಟಕ್ಕೆ ಮಹಿಳಾ ಪರ ಹೆಜ್ಜೆ ಎಂದು ಕಂಡರೂ ಅವುಗಳ ಸಿಬ್ಬಂದಿಯ ತರಬೇತಿ ಮತ್ತು ಇತರ ವಿಚಾರಗಳ ಬಗ್ಗೆ ಆಯವ್ಯಯ ಮೌನವಾಗಿದೆ.

ಈ ಆಯವ್ಯಯವನ್ನು ಲಿಂಗವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಿ­ದಾಗ, ಮಹಿಳಾ ಅಭಿವೃದ್ಧಿಯನ್ನು ನಿಜವಾದ ಅರ್ಥದಲ್ಲಿ ಸಾಧಿಸಲು ಅಗತ್ಯವಾದ ಹಣಕಾಸು ಮಂಜೂರಾತಿ ಮತ್ತು ರಾಜಕೀಯ ಇಚ್ಛಾಶಕ್ತಿ­ಗಳೆರಡರ ಅಭಾವ ಕಾಣುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT