ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬಾಂಗ್ಲಾ | ಹಿಂಸೆಗಿಲ್ಲ ಅಂಕುಶ: ಹೋಟೆಲ್‌ಗೆ ಬೆಂಕಿ– 24 ಮಂದಿ ಸಜೀವ ದಹನ

Published : 6 ಆಗಸ್ಟ್ 2024, 23:30 IST
Last Updated : 6 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್‌ ನೇಮಕ
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಅವರನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ರಾತ್ರಿ ನೇಮಕ ಮಾಡಿದ್ದಾರೆ ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ. ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಶಹಾಬುದ್ದೀನ್ ಅವರು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಯೋಜಕರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಪದಚ್ಯುತ ಸಚಿವರ ಬಂಧನ:
ಶೇಖ್‌ ಹಸೀನಾ ಅವರು ದೇಶ ತೊರೆದ ಬೆನ್ನಲ್ಲೇ, ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ಪದಚ್ಯುತ ವಿದೇಶಾಂಗ ಸಚಿವ ಹಸನ್ ಮಹಮೂದ್ ಮತ್ತು ಮಾಜಿ ರಾಜ್ಯ ಸಚಿವ ಜುನೈದ್ ಅಹ್ಮದ್ ಪಾಲಕ್ ಅವರನ್ನು ಮಂಗಳವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಮಹಮೂದ್ ಅವರು ಢಾಕಾದ ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೆಹಲಿ ಮಾರ್ಗದ ವಿಮಾನವೇರಲು ತೆರಳಿದ್ದರು ಎಂದು ಏರ್‌ಪೋರ್ಟ್ ಏವಿಯೇಷನ್ ​​ಸೆಕ್ಯುರಿಟಿ (ಎವಿಎಸ್‌ಇಸಿ) ಅಧಿಕಾರಿಯೊಬ್ಬರು ಹೇಳಿರುವುದಾಗಿ ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಮಹಮೂದ್‌ ಈ ಹಿಂದೆ ಬಂದರಿನ ಮೂಲಕ ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದ್ದರು. ಆದರೆ ಗಡಿ ದಾಟಲು ಅವರಿಗೆ ಅವಕಾಶ ನೀಡಿರಲಿಲ್ಲ. ಅಂಚೆ, ದೂರಸಂಪರ್ಕ ಮತ್ತು ಐಸಿಟಿಯ ಮಾಜಿ ರಾಜ್ಯ ಸಚಿವ ಜುನೈದ್ ಅಹ್ಮದ್ ಪಾಲಕ್ ಅವರ ಮೇಲೆ ದೇಶ ತೊರೆಯದಂತೆ ನಿರ್ಬಂಧ ಹೇರಿದ ಕೆಲವು ತಾಸುಗಳಲ್ಲಿ ಅವರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ.
ನಾಜೂಕಾಗಿ ಟೀಕಿಸಿದ ಕೇಂದ್ರ
ನವದೆಹಲಿ: ಬಾಂಗ್ಲಾದೇಶದ ಪರಿಸ್ಥಿತಿ ಇನ್ನಷ್ಟು ಪ್ರಕ್ಷುಬ್ಧಗೊಳ್ಳುವುದಕ್ಕೆ ಶೇಖ್ ಹಸೀನಾ ನೇತೃತ್ವದ ಸರ್ಕಾರವೇ ಕಾರಣ ಎಂದು ಕೇಂದ್ರ ಸರ್ಕಾರವು ಸೂಕ್ಷ್ಮವಾಗಿ ತಿಳಿಸಿದೆ. ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ಜುಲೈ 21ರಂದು ನೀಡಿದ ತೀರ್ಪಿನ ನಂತರದ ‘ತೀರ್ಮಾನಗಳು ಹಾಗೂ ಕ್ರಮಗಳು’ ಪರಿಸ್ಥಿತಿಯನ್ನು ವಿಷಮಗೊಳಿಸಿದವು ಎನ್ನುವ ಮೂಲಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹಸೀನಾ ನೇತೃತ್ವದ ಸರ್ಕಾರವನ್ನು ನಾಜೂಕಾಗಿ ಟೀಕಿಸಿದರು. ‘ಜುಲೈ ತಿಂಗಳಾದ್ಯಂತ ಹಿಂಸಾ ಚಾರ ನಡೆಯಿತು. ವಿದ್ಯಾರ್ಥಿಗಳ ಜೊತೆ ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ನಾವು ಮತ್ತೆ ಮತ್ತೆ ಕಿವಿಮಾತು ಹೇಳಿದ್ದೆವು’ ಎಂದು ಜೈಶಂಕರ್ ಸಂಸತ್ತಿಗೆ ತಿಳಿಸಿದ್ದಾರೆ.
ಬಾಂಗ್ಲಾ: ಸಂಸತ್ ವಿಸರ್ಜನೆ
ಮೊಹಾಕಾ:(ಪಿಟಿಐ): ಬಾಂಗ್ಲಾದೇಶ ಅಧ್ಯಕ್ಷ ಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಅಧ್ಯಕ್ಷರ ಈ ನಿರ್ಧಾರದಿಂದ, ಹೊಸದಾಗಿ ಚುನಾವಣೆಗಳನ್ನು ನಡೆಸಲು ದಾರಿ ಸುಗಮವಾ. ಪೂರ್ಣ ಪ್ರಮಾಣದ ಮಧ್ಯಂತರ ಸರ್ಕಾರ ರಚನೆ ಕುರಿತು ಶೀಘ್ರವೇ ಘೋಷಣೆ ಹೊರಬೀಳಲಿದೆ ಎಂದು 'ವಂಗಭವನ' (ರಾಷ್ಟ್ರಪತಿ ಭವನ) ಅಧಿಕಾರಿಗಳು ಹೇಳಿದ್ದಾರೆ. ಮೂರು ಸಶಸ್ತ್ರ ಪಡೆಗಳ ನಾಯಕರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ನಾಗರಿಕ ಸಂಘಟನೆಗಳು ಹಾಗೂ ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ (ಎಡಿಎಸ್‌ಎಂ) ಮುಖಂಡರ ಜೊತೆಗೆ ಚರ್ಚಿಸಿದ ನಂತರ ಅಧ್ಯಕ್ಷ ಶಹಾಬುದ್ಧೀನ್ ಅವರು ಸಂಸತ್ತಿನ ವಿಸರ್ಜಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ' ಎಂದು ಅಧ್ಯಕ್ಷರ ಕಚೇರಿಯ ಪ್ರಕಟಣೆಯಲ್ಲಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT