ಒಟ್ಟಾವ: ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಮುಖಂಡನ ಹತ್ಯೆ ಪ್ರಕರಣದ ತನಿಖೆಗೆ ಭಾರತವು ಕೆನಡಾ ಸರ್ಕಾರಕ್ಕೆ ಸಹಕಾರ ನೀಡುತ್ತಿದೆ. ಅಲ್ಲದೆ, ಹದಗೆಟ್ಟಿದ್ದ ಉಭಯ ದೇಶಗಳ ನಡುವಿನ ಸಂಬಂಧವು ಸುಧಾರಿಸುತ್ತಿದೆ ಎಂದು ಕೆನಡಾದ ರಾಷ್ಟ್ರೀಯ ಭದ್ರತೆಯ ಮಾಜಿ ಸಲಹೆಗಾರ್ತಿ ಹೇಳಿದರು.
ಶುಕ್ರವಾರ ಸಿಟಿವಿ ಜೊತೆ ಸಂದರ್ಶನದಲ್ಲಿ ಭಾಗಿಯಾದ ಕೆನಡಾದ ರಾಷ್ಟ್ರೀಯ ಭದ್ರತೆಯ ಮಾಜಿ ಸಲಹೆಗಾರ್ತಿ ಜೊಡಿ ಥಾಮಸ್, ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಕೊಲೆ ಪ್ರಕರಣದ ತನಿಖೆಗೆ ಭಾರತ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ನಿಜ್ಜಾರ್ ಹತ್ಯೆ ಪ್ರಕರಣದ ತನಿಖೆಗೆ ಭಾರತ ಸಹಕಾರ ನೀಡುತ್ತಿಲ್ಲ ಎಂಬ ಆರೋಪದಿಂದಾಗಿ ಉಭಯ ದೇಶಗಳ ಸಂಬಂಧ ಹದಗೆಟ್ಟ ಬಳಿಕ ಇದೇ ಮೊದಲ ಬಾರಿಗೆ ಕೆನಡಾದ ಅಧಿಕಾರಿಯೊಬ್ಬರು, ಭಾರತ ಸಹಕಾರ ನೀಡುತ್ತಿದೆ ಎಂದು ಒಪ್ಪಿಕೊಂಡಂತಾಗಿದೆ.
ಹಲವು ತಿಂಗಳುಗಳ ವೈಷಮ್ಯದ ಬಳಿಕ ಭಾರತದ ಜೊತೆ ಆರೋಗ್ಯಕರ ಸಂಬಂಧದ ನಿಟ್ಟಿನಲ್ಲಿ ಕೆನಡಾ ಕಾರ್ಯಪ್ರವೃತ್ತವಾಗಿದೆ ಎಂದೂ ಅವರು ಹೇಳಿದರು.