ಜೆರುಸಲೇಂ: ಗಾಜಾದ ನಗರಗಳು, ಪಟ್ಟಣಗಳು ಮತ್ತು ನಿರಾಶ್ರಿತರ ಕೇಂದ್ರಗಳ ಮೇಲೆ ಇಸ್ರೇಲ್ ಪಡೆಗಳು ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ಬುಧವಾರ, ಗುರುವಾರ ರಾತ್ರಿಯಿಡೀ ಇಸ್ರೇಲ್ ಪಡೆಗಳು ಬಾಂಬ್ಗಳ ಸುರಿಮಳೆಗೈ
ದಿವೆ. ದೀರ್ ಅಲ್–ಬಲಾಹ್ ಪಟ್ಟಣದ ಬಳಿ ಐವರು ಮಕ್ಕಳು, ಏಳು ಮಹಿಳೆಯರು ಸೇರಿ 25 ಮಂದಿ ಬಲಿಯಾಗಿದ್ದಾರೆ.
‘ರಾತ್ರಿಯಿಡೀ ನರಮೇಧ ನಡೆದಿದೆ. ವಾಯುದಾಳಿಗೆ ಒಳಗಾದ ನಿರಾಶ್ರಿತರ ಕೇಂದ್ರದಲ್ಲಿದ್ದವರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ಅವರನ್ನು ಸುರಕ್ಷಿತವಾಗಿ ಹೊರತರಲು ಅಗತ್ಯವಿರುವ ಸಾಧನ ಇರಲಿಲ್ಲವಾದ್ದರಿಂದ, ಅವರನ್ನು ಹೊರಗೆ ಕರೆತರಲು ಸಾಧ್ಯವಾಗಲಿಲ್ಲ’ ಎಂದು ನುಸೀರತ್ ಪ್ರದೇಶದ ನಿವಾಸಿ ಸಯೀದ್ ಮುಸ್ತಾಫಾ ಹೇಳಿದ್ದಾರೆ.
ಈ ಭಾಗದಲ್ಲಿ ನೆಲೆಕಂಡುಕೊಂಡಿದ್ದ ಸಾವಿರಾರು ಮಂದಿ ತಮ್ಮ ಮನೆಗಳು ಮತ್ತು ನಿರಾಶ್ರಿತರ ಕೇಂದ್ರಗಳನ್ನು ಈಜಿಪ್ಟ್ ಗಡಿ ಮತ್ತು ದಕ್ಷಿಣ ಮೆಡಿಟರೇನಿಯನ್ ಕರಾವಳಿ ಪ್ರದೇಶ
ದಲ್ಲಿರುವ ವಲಸಿಗರ ಕೇಂದ್ರಗಳತ್ತ ಗುಳೆ ಹೊರಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಯುದ್ಧದಲ್ಲಿ ಪ್ಯಾಲೆಸ್ಟೀನ್ನ 20 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಉತ್ತರ ಗಾಜಾದಲ್ಲಿದ್ದ 23 ಲಕ್ಷ ಜನರ ಪೈಕಿ ಶೇ 85ರಷ್ಟು ಮಂದಿ ಇತರೆ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇದೇ ರೀತಿಯ ಪರಿಸ್ಥಿತಿ ದಕ್ಷಿಣದಲ್ಲೂ ಎದುರಾಗಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಯುದ್ಧ ವಿಮಾನಗಳ ಹಾರಾಟ: ಕೇಂದ್ರ ಗಾಜಾದಲ್ಲಿ ಇಸ್ರೇಲ್ ಯುದ್ಧ ವಿಮಾನಗಳು ಹಾರಾಡುತ್ತಿದ್ದರೆ, ಬುರೀಜ್ ಮತ್ತು ನುಸೀರತ್ ನಿರಾಶ್ರಿತರ ಕ್ಯಾಂಪ್ಗಳ ಬಳಿ ಫಿರಂಗಿದಾಣಗಳನ್ನು ನಿರ್ಮಿಸಲಾಗಿದೆ ಎಂದು
ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಮತ್ತೊಂದೆಡೆ ಈ ದಾಳಿಯನ್ನು ಕೇಂದ್ರ ಗಾಜಾಕ್ಕೂ ವಿಸ್ತರಿಸುವುದಾಗಿ ಇತ್ತೀಚೆಗಷ್ಟೇ ತಿಳಿಸಿರುವ ಇಸ್ರೇಲ್, ಯುದ್ಧ ಟ್ಯಾಂಕರ್ಗಳು ಮತ್ತು ಸೇನಾಪಡೆಗಳು ಕೇಂದ್ರ ಗಾಜಾಕ್ಕೆ ತೆರಳುವ ಮುನ್ನ ವೈಮಾನಿಕ ಮತ್ತು ಶೆಲ್ ದಾಳಿ ನಡೆಸಿದೆ.
ಆಹಾರ ಕೊರತೆ: ‘ಗಾಜಾದ ನಾಲ್ವರ ಪೈಕಿ ಒಬ್ಬರು ಹಸಿವಿನಿಂದ ಬಳಲುವಂತಾಗಿದೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.