ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿದ್ದರೂ, ನಿಷೇಧವಿದ್ದರೂ AI ಮೂಲಕ ಚುನಾವಣಾ ಭಾಷಣ ಮಾಡಿದ ಇಮ್ರಾನ್ ಖಾನ್!

ಪಿಟಿಐ ಕಾರ್ಯಕರ್ತರ ವಿನೂತನ ಪ್ರಯತ್ನ: ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಪ್ರಕರಣವಿದು: ಫೆಬ್ರುವರಿ 8 ರಂದು ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ
Published 18 ಡಿಸೆಂಬರ್ 2023, 10:34 IST
Last Updated 18 ಡಿಸೆಂಬರ್ 2023, 10:34 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಅಲ್ಲಿನ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆಯೆ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

ಏತನ್ಮಧ್ಯೆ ಸದ್ಯ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಕೃತಕ ಬುದ್ದಿಮತ್ತೆ ಬಳಸಿ (AI-Artificial Intelligence) ತಮ್ಮ ಪಕ್ಷ ಪಾಕಿಸ್ತಾನ ತೆಹರೀಕ್‌ ಇ–ಇನ್ಸಾಫ್‌ -ಪಿಟಿಐ ಕಾರ್ಯಕರ್ತರನ್ನು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಈ ರೀತಿ ಎಐ ಧ್ವನಿ ಬಳಸಿ ಚುನಾವಣಾ ಭಾಷಣ ಮಾಡಿದ ಪ್ರಕರಣಗಳಲ್ಲಿ ದಕ್ಷಿಣ ಏಷ್ಯಾದಲ್ಲಿಯೇ ಇದು ಮೊದಲನೆಯದ್ದು ಎಂದು ರಾಯಿಟರ್ಸ್ ವರದಿ ಮಾಡಿದೆ.

ಇಮ್ರಾನ್ ಖಾನ್ ಧ್ವನಿಯನ್ನು ಹೋಲುವ AI ಧ್ವನಿ ಮೂಲಕ ಯುಟ್ಯೂಬ್‌ನಲ್ಲಿ ಫೋಟೊದೊಂದಿಗೆ ವಿಡಿಯೊ ಹಂಚಿಕೊಳ್ಳಲಾಗಿದ್ದು, 'ನಮ್ಮ ಪಕ್ಷಕ್ಕೆ ಸಾರ್ವಜನಿಕ ರ್‍ಯಾಲಿಗಳನ್ನು ಆಯೋಜಿಸಲು ಬಿಡುತ್ತಿಲ್ಲ' ಎಂದು ನೋವು ತೋಡಿಕೊಳ್ಳಲಾಗಿದೆ.

'ನಮ್ಮ ಜನರನ್ನು ಅಪಹರಣ ಮಾಡಲಾಗುತ್ತಿದೆ. ಅವರ ಕುಟುಂಬದವರಿಗೆ ಹಿಂಸೆ ನೀಡಲಾಗುತ್ತಿದೆ' ಎಂಬ ಆಕ್ರೋಶದ ಮಾತುಗಳನ್ನು ವ್ಯಕ್ತಪಡಿಸಲಾಗಿದೆ.

ಈ AI ಧ್ವನಿಯನ್ನು ಪಿಟಿಐ ಪಕ್ಷ ತನ್ನ ಯುಟ್ಯೂಬ್‌ನಲ್ಲಿ ಲೈವ್ ಸ್ಟ್ರಿಮಿಂಗ್ ಮಾಡಿತ್ತು. ಲಕ್ಷಾಂತರ ವೀಕ್ಷಣೆ ಕಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿ ಹರಿದಾಡುತ್ತಿದೆ. ಭಾಷಣದ ನೋಟ್ ಅನ್ನು ಬರೆದು ಕಳುಹಿಸಲು ಇಮ್ರಾನ್ ಖಾನ್ ಅವರು ಜೈಲಾಧಿಕಾರಿಗಳ ಅನುಮತಿ ಪಡೆದಿದ್ದರು ಎಂದು ವರದಿ ತಿಳಿಸಿದೆ. ಲಿಖಿತ ಭಾಷಣದ ತುಣಕನ್ನು ಇಟ್ಟುಕೊಂಡು ಇಮ್ರಾನ್ ಖಾನ್ ಎಐ ಧ್ವನಿ ರಚಿಸಿ ಬಿಡಲಾಗಿದೆ.

ಸದ್ಯ ಇಮ್ರಾನ್ ಖಾನ್ ಅವರಿಗೆ ಮಾಧ್ಯಮಗಳ ಮುಂದೆ ಮಾತನಾಡುವುದಕ್ಕೆ ಹಾಗೂ ಪಕ್ಷದ ಸಾರ್ವಜನಿಕ ಸಭೆ–ಸಮಾರಂಭಗಳಲ್ಲಿ ಭಾಗವಹಿಸಲು ನಿಷೇಧವಿದೆ. ಪರಿಸ್ಥಿತಿ ಹೀಗಿದ್ದಾಗಲೂ ಇಮ್ರಾನ್ ಖಾನ್ ಪಕ್ಷದ ಸಾಮಾಜಿಕ ಜಾಲತಾಣದ ಘಟಕದ ಮುಖಂಡರು ಈ ವಿನೂತನ ಉಪಾಯ ಮಾಡಿರುವುದು ಗಮನ ಸೆಳೆದಿದೆ.

ಇನ್ನೊಂದೆಡೆ ಪಾಕಿಸ್ತಾನದಲ್ಲಿ ಇಂಟರ್‌ನೆಟ್ ಬಳಕೆಗೆ ವ್ಯಾಪಕ ಅಡಚಣೆಗಳು ಕಂಡು ಬರುತ್ತಿದ್ದು ಇದು ವಿರೋಧ ಪಕ್ಷದವರ ಕೈವಾಡ ಎಂದು ಪಿಟಿಐ ಆರೋಪಿಸಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರ, ಇಂಟರ್‌ನೆಟ್ ಸೇವೆ ಸಾಮಾನ್ಯವಾಗಿದೆ ಎಂದು ಹೇಳಿದೆ.

ತೊಶಖಾನ ಪ್ರಕರಣ ಸೇರಿದಂತೆ ಹತ್ತಾರು ಪ್ರಕರಣಗಳನ್ನು ಇಮ್ರಾನ್ ಖಾನ್ ಎದುರಿಸುತ್ತಿದ್ದು, ಈ ಚುನಾವಣೆ ಎದುರಿಸಲು ಪಿಟಿಐ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇತ್ತೀಚಿಗೆ ‘ಅಲ್‌–ಖಾದಿರ್‌ ಟ್ರಸ್ಟ್‌’ ಭ್ರಷ್ಟಾಚಾರ ಪ್ರಕರಣದಲ್ಲಿ  ಖಾನ್‌ ಅವರನ್ನು ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ, ಡಿಸೆಂಬರ್‌ 20ರಿಂದ 22ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ವಾಪಸ್‌ ಪಡೆಯಲು ಜನವರಿ 12 ಕೊನೆಯ ದಿನವಾಗಿದೆ.

ರಾಜಕೀಯ ಪಕ್ಷಗಳಿಗೆ ಜನವರಿ 13ರಂದು ಚುನಾವಣಾ ಚಿಹ್ನೆ ನಿಗದಿಪಡಿಸಲಾಗುತ್ತದೆ. ಫೆಬ್ರುವರಿ 8ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT