ವಿಶ್ವಸಂಸ್ಥೆ: ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾವು ಆಹಾರ, ಇಂಧನದಿಂದ ಹಿಡಿದು ಅಪಹರಣ ಮಾಡಿದ್ದ ಮಕ್ಕಳವರೆಗೆ ಎಲ್ಲವನ್ನೂ ‘ಸಶಸ್ತ್ರೀಕರಣ’ಗೊಳಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಳಿದ ರಾಷ್ಟ್ರಗಳ ವಿರುದ್ಧವೂ ಅವರು (ರಷ್ಯಾ) ಇದೇ ರೀತಿಯಾಗಿ ನಡೆದುಕೊಳ್ಳಬಹುದು ಎಂದು ಝೆಲೆನ್ಸ್ಕಿ, ವಿಶ್ವದ ನಾಯಕರನ್ನು ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಉನ್ನತಮಟ್ಟದ ವಾರ್ಷಿಕ ಸಭೆಯನ್ನು ಮಂಗಳವಾರ ಉದ್ದೇಶಿಸಿ ಮಾತನಾಡಿದ ಅವರು, ‘ಒಂದು ರಾಷ್ಟ್ರದ ವಿರುದ್ಧ ದ್ವೇಷವನ್ನೇ ಅಸ್ತ್ರವನ್ನಾಗಿಸಿಕೊಂಡಾಗ, ಅದು ಎಂದಿಗೂ ಕೊನೆಯಾಗುವುದಿಲ್ಲ’ ಎಂದು ಹೇಳಿದರು.
‘ಉಕ್ರೇನ್ ವಿರುದ್ಧದ ಪ್ರಸ್ತುತ ಯುದ್ಧದ ಗುರಿಯು ನಮ್ಮ ಭೂಮಿ, ನಮ್ಮ ಜನರು, ನಮ್ಮ ಜೀವನ, ನಮ್ಮ ಸಂಪನ್ಮೂಲಗಳನ್ನು ನಮ್ಮ ವಿರುದ್ಧದ ಅಸ್ತ್ರಗಳಾಗಿ ಪರಿವರ್ತಿಸುವುದಾಗಿದೆ. ಇದು ಅಂತರರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾದುದು’ ಎಂದು ಝೆಲೆನ್ಸ್ಕಿ ಹೇಳಿದರು.
15 ನಿಮಿಷಗಳ ಭಾಷಣದಲ್ಲಿ ಝೆಲೆನ್ಸ್ಕಿ, ‘ಯುದ್ಧದಲ್ಲಿ ರಷ್ಯಾ ಪಡೆಗಳು ಕನಿಷ್ಠ ಹತ್ತಾರು ಸಾವಿರ ಮಕ್ಕಳನ್ನು ಅಪಹರಿಸಿಕೊಂಡು ಹೋಗಿವೆ. ಆ ಮಕ್ಕಳನ್ನು ರಷ್ಯಾದಲ್ಲಿಟ್ಟುಕೊಂಡು ಅವರಿಗೆ ಉಕ್ರೇನ್ ಅನ್ನು ದ್ವೇಷಿಸಲು ಕಲಿಸಲಾಗುತ್ತಿದೆ. ಆ ಮಕ್ಕಳಿಗೆ ಕುಟುಂಬದ ಸಂಬಂಧಗಳಿಂದ ದೂರ ಮಾಡಲಾಗಿದೆ. ಇದು ಸ್ಪಷ್ಟವಾಗಿ ನರಮೇಧ ಕೃತ್ಯ’ ಎಂದು ಅವರು ಹೇಳಿದರು.