ಕಾಂಗೈನಿಂದ ಸಿಡಿದ ಬಣಕ್ಕೆ ಅರ್ಜುನ್ ಸಿಂಗ್ ಕಾರ್ಯಾಧ್ಯಕ್ಷ
ನವದೆಹಲಿ, ಮೇ 22 (ಪಿಟಿಐ)– ಕಾಂಗ್ರೆಸ್ (ಐ)ನಿಂದ ಸಿಡಿದ ಬಣದ ಕಾರ್ಯಾಧ್ಯಕ್ಷರನ್ನಾಗಿ ಅರ್ಜುನ್ ಸಿಂಗ್ ಅವರನ್ನು ಇಂದು ನೇಮಿಸಲಾಯಿತು. ಇದರೊಂದಿಗೆ ಕಾಂಗೈ ವಿಭಜನೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಎನ್.ಡಿ.ತಿವಾರಿ– ಅರ್ಜುನ್ ಸಿಂಗ್ ನೇತೃತ್ವದ ಪಕ್ಷವು ಸಾಂಸ್ಥಿಕ ಸ್ವರೂಪ ತಾಳಿದೆ.
ಪಕ್ಷದ ವಿವಿಧ ಸಾಂಸ್ಥಿಕ ಘಟಕಗಳನ್ನು ರಚಿಸುವ ಕಾರ್ಯವನ್ನು ಪಕ್ಷಾಧ್ಯಕ್ಷ ಎನ್.ಡಿ.ತಿವಾರಿ ಅವರು ಇಂದು ಆರಂಭಿಸಿದರು.
ಸೋನಿಯಾ ಗಾಂಧಿ ಅವರ ಒಲವು ಯಾರ ಕಡೆಗೆ ಎಂಬ ಕಾತರ ಭಿನ್ನಮತೀಯರ ವಲಯದಲ್ಲಿ ಕಂಡುಬಂದಿದೆ.
ಅಪರಾಧ ಕಾನೂನಿಗೆ ತಿದ್ದುಪಡಿ
ನವದೆಹಲಿ, ಮೇ 22 (ಯುಎನ್ಐ, ಪಿಟಿಐ)– ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಬಂಧಿತರಾದ ವ್ಯಕ್ತಿಗಳು ಜಾಮೀನು ಪಡೆಯಲು ಅವಕಾಶ ನೀಡುವ ಅಪರಾಧ ಕಾನೂನು ತಿದ್ದುಪಡಿ ಮಸೂದೆ(1995)ಯನ್ನು ಸರ್ಕಾರ ಇಂದು ರಾಜ್ಯಸಭೆಯಲ್ಲಿ ಮಂಡಿಸಿತು.
ನಾಳೆಗೆ ಅವಧಿ ಮುಕ್ತಾಯವಾಗಲಿರುವ ವಿವಾದಾತ್ಮಕ ಟಾಡಾ ಕಾಯ್ದೆಯ ಸ್ಥಾನವನ್ನು ಈ ಮಸೂದೆ ತುಂಬಲಿದೆ.