ಬೆಂಗಳೂರು, ಅ. 11– ಆರೋಪಿಗಳಿಬ್ಬ ರಿಂದ ವಶಪಡಿಸಿಕೊಂಡ ಸುಮಾರು ಐವತ್ತು ಲಕ್ಷ ರೂಪಾಯಿ ಬೆಲೆಬಾಳುವ ಮಾದಕ ವಸ್ತುವನ್ನು (ಹೆರಾಯಿನ್) ಪೊಲೀಸ್ ಅಧಿಕಾರಿಗಳೇ ಮಾರಲು ಯತ್ನಿಸಿ ಸಿಕ್ಕಿ ಬಿದ್ದಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.
ರಾಮಮೂರ್ತಿ ನಗರದ ಇನ್ಸ್ಪೆಕ್ಟರ್ ಡಿ. ವೆಂಕಟೇಶ್, ಇದೇ ಠಾಣೆಯಲ್ಲಿ ಕೆಲಸ ಮಾಡಿ ಈಗ ವಿಮಾನ ನಿಲ್ದಾಣ ಭದ್ರತಾ ವಿಭಾಗದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ವಿ.ಬಿ.ರಾಜು ಮತ್ತು ಹೆಡ್ ಕಾನ್ಸ್ಟೆಬಲ್ ಸೋಮಾಜಿರಾವ್ ಅವರು ಹೆರಾಯಿನ್ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದರು ಎಂದು ಪೊಲೀಸ್ ಕಮಿಷನರ್ ಟಿ. ಶ್ರೀನಿವಾಸುಲು ಇಂದು ಪತ್ರಕರ್ತರಿಗೆ ತಿಳಿಸಿದರು.
ಕೈಗಾರಿಕಾ ಕಲ್ಮಶ ಬೆಂಗಳೂರಿಗೆ ಮಾರಕ
ಬೆಂಗಳೂರು, ಅ. 11– ಪರಿಸರಕ್ಕೆ ಮಾರಕವಾಗಿರುವ, ನಾಗರಿಕ ಬದುಕಿಗೇ ವಿನಾಶಕಾರಿ ಎನ್ನಲಾಗಿರುವ ಲಕ್ಷಾಂತರ ಟನ್ ಕೈಗಾರಿಕಾ ಕಲ್ಮಶ (ಇಂಡಸ್ಟ್ರಿಯಲ್ ವೇಸ್ಟ್) ಬೆಂಗಳೂರು ನಗರದ ವಿವಿಧ ಕಾರ್ಖಾನೆಗಳಲ್ಲಿ ‘ಕೊಳೆಯುತ್ತ’ ಬಿದ್ದಿದ್ದು, ಅದನ್ನು ವಿಲೇವಾರಿ ಮಾಡುವ ತಂತ್ರ ಜ್ಞಾನಕ್ಕೆ ಈಗ ಹುಡುಕಾಟ ಸಾಗಿದೆ.
ಈ ಕಸವನ್ನು ಎಲ್ಲೆಂದರೆ ಅಲ್ಲಿ ಬಿಸಾಕುವಂತಿಲ್ಲ. ಹಲವಾರು ಬಗೆಯ ಮಾರಕ ಆ್ಯಸಿಡ್ಗಳು ಮತ್ತು ನಂಜು ರಸಾಯನಗಳ ಮಿಶ್ರಣವಾಗಿರುವ ಈ ಕಸ, ಭವಿಷ್ಯದ ಪೀಳಿಗೆಯನ್ನು ವಿನಾಶದ ಮಡುವಿಗೆ ತಳ್ಳುವ ಅಪಾಯವಿರುವ ಹಿನ್ನೆಲೆಯಲ್ಲಿ ಅತ್ಯುನ್ನತ ತಂತ್ರಜ್ಞಾನ ಬಳಸಿ ಅದರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ರಾಜ್ಯ ಪರಿಸರ ಇಲಾಖೆಯ ನಿಲುವಾಗಿದೆ.