ಕಲಬುರ್ಗಿ: ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾಗಿದೆ. ಬಸ್ ಮತ್ತು ವಿಮಾನಗಳ ಸಂಚಾರ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ, ರೈಲು ಪ್ರಯಾಣ ವಿಷಯದಲ್ಲಿ ಮಾತ್ರ ನಿರ್ಬಂಧಗಳ ಉದ್ದ ಪಟ್ಟಿಯೇ ಇದೆ. ರೈಲಿನಲ್ಲಿ ಪ್ರಯಾಣಿಸುವುದಿರಲಿ, ನಿಲ್ದಾಣ ಪ್ರವೇಶಿಸಲು ಹರಸಾಹಸ ಪಡಬೇಕು. ಸ್ವಲ್ಪ ನಿಯಮ ಉಲ್ಲಂಘಿಸಿದರೂ ರೈಲ್ವೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕು.
ಕಲಬುರ್ಗಿಯಲ್ಲಿ ಅಷ್ಟೇ ಅಲ್ಲ, ದೇಶವ್ಯಾಪಿ ಹಲವಾರು ನಿಯಮಗಳನ್ನು ರೂಪಿಸಲಾಗಿದ್ದು ರೈಲು ಪ್ರಯಾಣಿಕರು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು. ಮೊದಲಿನಂತೆ ಸಹಜವಾಗಿ ಅವರು ರೈಲಿನಲ್ಲಿ ಪ್ರಯಾಣಿಸಲಾಗದು, ಪ್ಲಾಟ್ಫಾರ್ಮ್ ಟಿಕೆಟ್ ಸಿಗದು, ಕಾಯ್ದಿರಿಸಿದ ಟಿಕೆಟ್ ಇಲ್ಲದಿದ್ದರೆ ನಿಲ್ದಾಣದೊಳಗೆ ಹೋಗಲು ಸಹ ಸಾಧ್ಯವಾಗುವುದಿಲ್ಲ!
ದೈನಂದಿನ ಕಾರ್ಯ, ದುಡಿಮೆಗೆ ಸಂಚರಿಸುತ್ತಿದ್ದ ಕೂಲಿಕಾರ್ಮಿಕರು, ಸರ್ಕಾರಿ-ಖಾಸಗಿ ಸಂಸ್ಥೆ ನೌಕರರು, ಸಣ್ಣಪುಟ್ಟ ವ್ಯಾಪಾರಸ್ಥರು, ರೈತರಿಗೆ ಅಲ್ಲದೇ ದೂರದ ಊರಿನ ಪ್ರಯಾಣಿಕರಿಗೆ ರೈಲು ಕಡಿಮೆ ಖರ್ಚಿನ ‘ಪುಷ್ಪಕ ವಿಮಾನ’ವಾಗಿತ್ತು. ಆದರೆ, ಕೋವಿಡ್ ಕಾರಣ ರೈಲ್ವೆ ಇಲಾಖೆಯು ರೂಪಿಸಿರುವ ನಿಯಮಗಳು ಅವರ ಪ್ರಯಾಣ ದುರ್ಬರಗೊಳಿಸಿದೆ!
ಬೆಳಿಗ್ಗೆ ಮತ್ತು ಸಂಜೆ ವೇಳೆ ಸಂಚರಿಸುವ ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಬಹುತೇಕ ಜನರಿಗೆ ತಮ್ಮೂರು ಮತ್ತು ಹಳ್ಳಿಗಳಿಗೆ ಹೋಗಲು ಆಶ್ರಯವಾಗಿದ್ದವು. ₹ 10 ರಿಂದ ₹ 30ರ ದರ ಪ್ರಯಾಣದ ಟಿಕೆಟ್ ತೆಗೆದುಕೊಂಡರೆ ಸಾಕಿತ್ತು. ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಹರಟುತ್ತ ಕೆಲವೇ ಗಂಟೆಗಳಲ್ಲಿ ಊರು ತಲುಪುತ್ತಿದ್ದರು. ಗ್ರಾಮೀಣ ಪ್ರದೇಶದ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ರೈಲ್ವೆ ಪಾಸ್ ಅನುಕೂಲ ಕಲ್ಪಿಸಿತ್ತು. ಆದರೆ, ಸದ್ಯಕ್ಕೆ ಅದ್ಯಾವುದೂ ಜಾರಿಯಲ್ಲಿ ಇಲ್ಲ.
‘ಪ್ರಯಾಣಿಸುವ ರೈಲಿನ ಸೀಟು ಕಾಯ್ದಿರಿಸಿದ ಟಿಕೆಟ್ ಇಲ್ಲದೇ ರೈಲು ನಿಲ್ದಾಣ ಪ್ರವೇಶಿಸುವಂತಿಲ್ಲ. ಸಾಮಾನ್ಯ ಮತ್ತು ಪ್ಲಾಟ್ಫಾರ್ಮ್ ಟಿಕೆಟ್ ವಿತರಿಸುವುದಿಲ್ಲ. ಕಾಯ್ದಿರಿಸಿದ ಟಿಕೆಟ್ಗಳನ್ನು ಒಂದೆರಡು ದಿನ ಮುಂಚಿತವಾಗಿ ತೆಗೆದುಕೊಳ್ಳಬೇಕು. ಆಯಾ ದಿನದಂದೇ ನೀಡುವುದಿಲ್ಲ’ ಎಂದು ರೈಲ್ವೆ ಇಲಾಖೆಯು ಸ್ಪಷ್ಟವಾಗಿ ಸೂಚಿಸಿದೆ.
ಪ್ರಯಾಣಿಕರ ಪಡಪಾಟಲು
‘ವಾಡಿ, ಶಹಾಬಾದ್ ಅಲ್ಲದೇ ಬೇರೆ ಊರುಗಳಿಗೆ ಹೋಗಲು ರೈಲು ಹೊರಡುವ 10 ನಿಮಿಷ ಮುಂಚಿತವಾಗಿ ಟಿಕೆಟ್ ಪಡೆಯುತ್ತಿದ್ದೆ. ಕೆಲವೊಮ್ಮೆ ಅವಸರದಲ್ಲಿ ಹತ್ತಿಕೊಂಡಾದರೂ ಊರು ತಲುಪುತ್ತಿದ್ದೆ. ಆದರೆ, ಈಗ ಕಾಯ್ದಿರಿಸಿದ ಟಿಕೆಟ್ ಇಲ್ಲದೇ ನಿಲ್ದಾಣದೊಳಗೆ ಪ್ರವೇಶಿಸಲು ರೈಲ್ವೆ ಇಲಾಖೆ ಸಿಬ್ಬಂದಿ ಬಿಡುವುದಿಲ್ಲ’ ಎಂದು ಶಹಾಬಾದ್ನ ಚಂದ್ರು ಸಮಸ್ಯೆ ತೋಡಿಕೊಳ್ಳುತ್ತಾರೆ.
‘ರೈಲಿನಲ್ಲಿ ಸೀಟು, ಬರ್ತ್, ಎಸಿ–1,2,3ಗೆ ಮುಂಚಿತವಾಗಿಯೇ ಸೀಟು ಕಾಯ್ದಿರಿಸಿಕೊಳ್ಳಬೇಕು. ಕೂತು ಪ್ರಯಾಣಿಸುವ ಕೋಟಾ ಭರ್ತಿಯಾದರೆ, ಅನಿವಾರ್ಯವಾಗಿ ಸ್ಲೀಪರ್ ಅಥವಾ ಎಸಿಗೆ ಸೀಟು ಕಾಯ್ದಿರಿಸಬೇಕು. ಸಮೀಪದ ಊರುಗಳಿದ್ದರೂ ಸ್ಲೀಪರ್ ಅಥವಾ ಎಸಿ ಸ್ಲೀಪರ್ ಟಿಕೆಟ್ ಖರೀದಿಸಬೇಕು. ನೂರು–ಸಾವಿರ ರೂಪಾಯಿಯಷ್ಟು ಖರ್ಚು ಮಾಡಲು ಜನಸಾಮಾನ್ಯರು, ಬಡವರ ಬಳಿ ಹಣವೆಲ್ಲಿರುತ್ತದೆ’ ಎಂದು ಶಹಾಬಾದ್ನ ನಿವಾಸಿ ರಮೇಶ ನಾಯಕ ನೋವಿನಿಂದ ಹೇಳುತ್ತಾರೆ.
‘ಕಲಬುರ್ಗಿಯಿಂದ ಲಾಡ್ಲಾಪುರದ ಸರ್ಕಾರಿ ಶಾಲೆಗೆ ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆದರೆ, ಹೊಸ ನಿಯಮಗಳಿಂದಾಗಿ ಅನಿವಾರ್ಯವಾಗಿ ಬಸ್ನಲ್ಲಿ ಪ್ರಯಾಣಿಸಬೇಕಿದೆ. ಬಸ್ ಪ್ರಯಾಣಕ್ಕೆ ಪ್ರತಿ ದಿನ ₹ 120 ಕೊಡಬೇಕು. ರೈಲಿನಲ್ಲಿ ತಿಂಗಳ ಪಾಸ್ ದರ ₹ 140 ಇತ್ತು. ಅನಾರೋಗ್ಯದಿಂದ ಬಳಲುವವರು ಬಸ್ನಲ್ಲಿ ಓಡಾಡುವುದು ತುಂಬಾನೇ ಕಷ್ಟ’ ಎಂದು ಶಿಕ್ಷಕಿ ಜಗದೇವಿ ಹೇಳುತ್ತಾರೆ. ಅವರಂತೆ ಹಲವಾರು ಸರ್ಕಾರಿ–ಖಾಸಗಿ ನೌಕರರು ಇಂಥ ಸಂಕಷ್ಟ ಎದುರಿಸುತ್ತಿದ್ದಾರೆ.
ಸಂಪೂರ್ಣ ಖಾಸಗೀಕರಣದತ್ತ ಮೊದಲ ಹೆಜ್ಜೆ
‘ಕೊರೊನಾ ನೆಪದಲ್ಲಿ ರೈಲ್ವೆ ಪ್ರಯಾಣಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ ಹೊರತು ಪ್ರಯಾಣಿಕಸ್ನೇಹಿ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಹೊರತು ಮತ್ತೇನೂ ಅಲ್ಲ’ ಎಂದು ಎಸ್ಯುಸಿಐ ಪಕ್ಷದ ನಾಯಕಿ ನಾಗಮ್ಮಾಳ ಆರೋಪಿಸುತ್ತಾರೆ.
ಕಲಬುರ್ಗಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ದೇವಾನಂದ ಅವರು ಪ್ರತಿ ದಿನ ವಾಡಿಯಿಂದ ಉದ್ಯಾನ ಎಕ್ಸ್ಪ್ರೆಸ್ ಹತ್ತಿ ಕಲಬುರ್ಗಿಗೆ ಬಂದಿಳಿಯುತ್ತಿದ್ದರು. ರೈಲ್ವೆ ಪ್ರಯಾಣಕ್ಕೆ ₹ 10 ಕೊಡುತ್ತಿದ್ದ ಅವರು ಬಸ್ ಪ್ರಯಾಣಕ್ಕೆ ₹ 50 ನೀಡಬೇಕಿದೆ.
ಮಿನಿ ವಿಧಾನಸೌಧದಲ್ಲಿ ಗುತ್ತಿಗೆ ಕಾರ್ಮಿಕರಾಗಿರುವ ಚಂದ್ರಶೇಖರ ಧನ್ನೇಕರ ಅವರ ಪರಿಸ್ಥಿತಿ ಕೂಡ ಹೆಚ್ಚು ಭಿನ್ನವಾಗಿಲ್ಲ. ಕಡಿಮೆ ದರದ ರೈಲ್ವೆ ಪಾಸ್ನಲ್ಲಿ ಸಂಚರಿಸುತ್ತಿದ್ದ ಅವರು ಈಗ ಬಸ್ ಪ್ರಯಾಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ.
ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಬಹುತೇಕ ಮಂದಿ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ರೈಲಿನಲ್ಲಿ ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಸೊಲ್ಲಾಪುರ ತಲುಪಿ, ಪುನಃ ತಮ್ಮೂರಿಗೆ ಮರುಳುತ್ತಿದ್ದರು. ಪ್ಯಾಸೆಂಜರ್ ರೈಲು ಬಂದ್ ಆಗಿದ್ದರಿಂದ ಮತ್ತು ಕಾಯ್ದಿರಿಸಿದ ಟಿಕೆಟ್ ಕಡ್ಡಾಯ ಮಾಡಿದಾಗಿನಿಂದ ರೋಗಿಗಳಿಗೆ ಪ್ರಯಾಣಿಸುವುದು ಕಷ್ಟಕರವಾಗಿದೆ’ ಎಂದು ಎಐಯುಟಿಯುಸಿ ಮುಖಂಡ ಶರಣು ಹೇರೂರ ಹೇಳುತ್ತಾರೆ.
‘ವಿಶೇಷ ರೈಲಿಗೆ ನಿಯಮಗಳ ಪಾಲನೆ ಅವಶ್ಯ’
ಕಲಬುರ್ಗಿ: ‘ಸದ್ಯ ವಿಶೇಷ ರೈಲುಗಳು ಮಾತ್ರ ಸಂಚರಿಸುತ್ತಿದ್ದು, ಪ್ಯಾಸೆಂಜರ್ ರೈಲುಗಳನ್ನು ಇನ್ನೂ ಆರಂಭಿಸಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ನಿಯಮಗಳನ್ನು ರೂಪಿಸಲಾಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ' ಎಂದು ಕಲಬುರ್ಗಿ ರೈಲ್ವೆ ಸ್ಟೇಷನ್ ವ್ಯವಸ್ಥಾಪಕ ಪ್ರಸಾದ್ ರಾವ್ ತಿಳಿಸಿದರು.
‘ಕಲಬುರ್ಗಿ ರೈಲು ನಿಲ್ದಾಣದಿಂದ ನಿತ್ಯವೂ 30 ರೈಲುಗಳು ಸಂಚರಿಸುತ್ತಿದ್ದು, ಅವುಗಳ ವೇಳಾಪಟ್ಟಿ ಬದಲಾಗಿದೆ. ನಿಲ್ದಾಣದ ಸೂಚನಾ ಫಲಕದಲ್ಲಿ ತಿಳಿಸಲಾದ ನಿಗದಿತ ಸಮಯದ ಆಸುಪಾಸಿನಲ್ಲಿ ರೈಲುಗಳು ಬರುತ್ತವೆ. ಪ್ರಯಾಣಿಕರು ಹಳೆಯ ಸಮಯ ಅನುಸರಿಸುವ ಬದಲು ಹೊಸ ಸಮಯವನ್ನು ಒಮ್ಮೆ ಪರಿಶೀಲಿಸಿಕೊಳ್ಳಬೇಕು. ಮುಂಗಡವಾಗಿ ಕಾಯ್ದಿರಿಸಿದ ಸೀಟುಗಳ ಪಟ್ಟಿಯ ಮಾಹಿತಿಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪಡೆಯಬಹುದು' ಎಂದು ತಿಳಿಸಿದರು.
‘ಪ್ರಯಾಣಿಕರು 90 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣಕ್ಕೆ ಬರಬೇಕು. ಕಾಯ್ದಿರಿಸಿದ ಅಥವಾ ಆರ್ಎಸಿ ಟಿಕೆಟ್ ಹೊಂದಿರುವವರು ಮಾತ್ರ ನಿಲ್ದಾಣದೊಳಗೆ ಪ್ರವೇಶಿಸಬಹುದು. ‘ವೇಟಿಂಗ್ ಲಿಸ್ಟ್’ ಟಿಕೆಟ್ ಹೊಂದಿರುವವರಿಗೆ ನಿಲ್ದಾಣ ಪ್ರವೇಶಿಸಲು ಅಥವಾ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಕಾಯ್ದಿರಿಸಿದ ಪಟ್ಟಿಯನ್ನು ರೈಲು ಹೊರಡುವ ಮೂರು ಅಥವಾ ನಾಲ್ಕು ಗಂಟೆ ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.