ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಕಾಗಿದೆ ಸ್ತ್ರೀಶಕ್ತಿ ಮಹಿಳಾ ಪಕ್ಷ!

ರಾಜಕೀಯವು ಪುರುಷಕೇಂದ್ರಿತ ಅಖಾಡ ಎಂಬ ನಂಬಿಕೆಯನ್ನು ಹುಸಿಗೊಳಿಸಬೇಕಿದೆ
Published 29 ಏಪ್ರಿಲ್ 2024, 22:21 IST
Last Updated 29 ಏಪ್ರಿಲ್ 2024, 22:21 IST
ಅಕ್ಷರ ಗಾತ್ರ

‘ಕೆರೆಗೆ ಹಾರ’ ಎಂಬುದು ಜನಪದ ಕಥನ ಕವನ. ಊರ ಗೌಡ ಕೆರೆ ಕಟ್ಟಿಸುತ್ತಾನೆ. ಅಲ್ಲಿ ಒಂದು ಹನಿಯೂ ನೀರು ಬರುವುದಿಲ್ಲ. ಕೆರೆ ತುಂಬಿ ನಳನಳಿಸುವಂತೆ ಆಗಲು, ಸೊಸೆಯಾಗಿರುವ ಹೆಣ್ಣಿನ ನರಬಲಿ ಕೊಡಬೇಕು ಎಂದು ಜ್ಯೋತಿಷಿ ಪರಿಹಾರ ಹೇಳುತ್ತಾನೆ. ಕುಟುಂಬದ ಕಿರಿಯ ಸೊಸೆಯನ್ನು ಬಲಿ ಕೊಡಲು ನಿರ್ಧಾರವಾಗುತ್ತದೆ. ಸಂಗತಿಯು ಪರೋಕ್ಷವಾಗಿ ಸೊಸೆಗೆ ತಿಳಿಯುತ್ತದೆ. ಆಕೆ ಅನುಭವಿಸುವ ಸಂಕಟ, ತಲ್ಲಣ, ತಳಮಳ ಅಷ್ಟಿಷ್ಟಲ್ಲ. ಗೆಳತಿಯರ ಮುಂದೆ ‘ಕೆರೆಗೆ ನನ ಹಾರ ಕೊಡ್ತಾರಂತೆ’ ಎಂದು ಹೇಳುತ್ತಾ ಬಿಕ್ಕುತ್ತಾಳೆ. ‘ಕೊಟ್ಟರೆ ಕೊಡಲೇಳು, ಇಟ್ಟಂಗ ಇರಬೇಕು’ ಎಂದು ಗೆಳತಿಯರು ಸ್ಥಾಪಿತ ಮೌಲ್ಯಗಳ ದರ್ಶನ ಮಾಡಿಸುತ್ತಾರೆ. ಬದುಕಿ ಉಳಿಯುವ ಎಲ್ಲ ಮಾರ್ಗಗಳೂ ಮುಚ್ಚಿಹೋಗುತ್ತವೆ. ಸೊಸೆಯನ್ನು ಕೆರೆಗೆ ಇಳಿಸಿ ಹಾರವಾಗಿಸುತ್ತಾರೆ. ಆಕೆ ಸಾಯುತ್ತಾಳೆ.

ಸಂವಿಧಾನ ನೀಡಿರುವ ಪುರುಷ ಮತ್ತು ಮಹಿಳೆಯರ ನಡುವಿನ ಸಮಾನತೆಯ ಹಕ್ಕನ್ನು ರಾಜಕೀಯ ಪಕ್ಷಗಳು ನಿರರ್ಥಕಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಮಹಿಳೆಯರೇ ಮುಂದಾಗಿ ರಾಜಕೀಯ ಪಕ್ಷ ಕಟ್ಟಿ ಸ್ಪರ್ಧೆಗೆ ಇಳಿಯಬೇಕು ಎಂದು ಮಾಲತಿ ಪಟ್ಟಣಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಏ. 24). ಈ ಪತ್ರವನ್ನು ಓದಿದಾಗ, ಮೇಲಿನ ಕಥನ ಕವನ ನೆನಪಾಗಿ ಕರುಳು ಹಿಂಡಿದಂತಾಯಿತು.

ದೇಶದ ಒಟ್ಟು ಮತದಾರರಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ನ್ಯಾಯಸಮ್ಮತ ಸಮಪಾಲು ನೀಡುತ್ತಿಲ್ಲ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿಯೂ ಮಹಿಳೆಯರ ಸ್ಪರ್ಧೆಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂಬ ಕೂಗು ಇದೆ. ಆದರೆ ಅದು ಗರ್ಜನೆಯಾಗಿ ಕೇಳಿಸುತ್ತಿಲ್ಲ.

ಮಹಿಳೆಯರು ಅನುಕಂಪ ಮತ್ತು ಮೀಸಲಾತಿಗಾಗಿ ಕಾಯುತ್ತಾ ಕುಳಿತುಕೊಳ್ಳುವುದು ನೋವಿನ ಸಂಗತಿ. ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಘಟಿತರಾಗಿ, ತಮ್ಮ ಅಸ್ಮಿತೆಯನ್ನು ಕಾಪಾಡುವ ಮಹಿಳಾ ರಾಜಕೀಯ ಪಕ್ಷವೊಂದನ್ನು ಕಟ್ಟಬೇಕು. ಮಹಿಳಾ ಮಂಡಳ, ಮಹಿಳಾ ಸಾಹಿತ್ಯ ಸಂಘಟನೆ, ಮಹಿಳಾ ಸಮಾಜ, ಕೃಷಿ ಮಹಿಳಾ ಸಂಘಗಳು ಅಸ್ತಿತ್ವದಲ್ಲಿವೆ. ಇವುಗಳನ್ನು ಪಕ್ಷ ಕಟ್ಟುವುದಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ದೊಡ್ಡದಾಗಿ ಬೆಳೆದಿದೆ. ಅವರು ಉತ್ಸಾಹಿಗಳು ಮತ್ತು ತಮ್ಮ ಹಕ್ಕುಗಳ ಬಗ್ಗೆ ಅರಿವುಳ್ಳವರು ಆಗಿದ್ದಾರೆ. ಅವರನ್ನು ಪಕ್ಷ ಕಟ್ಟುವ ಸಾಹಸಕ್ಕೆ ಹುರಿದುಂಬಿಸಬೇಕು. ಮಹಿಳೆಯರು ಮೂಲತಃ ಛಲವುಳ್ಳವರು. ಅಂತ
ರ್ಜ್ಞಾನಿಗಳು. ಅದು ಈಗ ಕ್ರಿಯಾರೂಪಕ್ಕೆ ಇಳಿಯಬೇಕು.

‘ಎಲ್ಲ ಮಹಿಳೆಯರು ಶೋಷಿತರು, ಮಹಿಳೆಯರೆಲ್ಲರೂ ದಲಿತರೇ’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ವಿಪರೀತ ಶೋಷಣೆಯನ್ನು ಅನುಭವಿಸುವ ಕಾರ್ಮಿಕರು, ದುಡಿಮೆಗಾರರು, ಕೃಷಿಕರ ಇನ್ನೊಂದು ಬಹುಸಂಖ್ಯಾತ ವರ್ಗ ದೇಶದ ಲ್ಲಿದೆ. ಅವರನ್ನೂ ಒಳಗೊಂಡರೆ ಮಹಿಳಾ ಪಕ್ಷಕ್ಕೆ ಖಂಡಿತ ಹೆಚ್ಚಿನ ಬಲ ಬರುತ್ತದೆ. ಈ ಬಗ್ಗೆ ಕೂಡ ಚಿಂತನೆ ನಡೆಯಬೇಕು.

ಪ್ರಸಕ್ತ 17ನೇ ಲೋಕಸಭೆಯಲ್ಲಿ 543 ಸದಸ್ಯರ ಪೈಕಿ 78 ಮಹಿಳಾ ಸದಸ್ಯರಿದ್ದಾರೆ. ಹಿಂದಿನ ಎಲ್ಲಾ ಲೋಕಸಭೆಗಳಲ್ಲಿಯೂ ಮಹಿಳಾ ಪ್ರಾತಿನಿಧ್ಯ ಇನ್ನೂ ಕಡಿಮೆ ಇತ್ತು. ರಾಜ್ಯಸಭೆಯಲ್ಲಿಯೂ ತಾರತಮ್ಯ ಎದ್ದು ಕಾಣುತ್ತದೆ. ಪ್ರಸಕ್ತ 224 ರಾಜ್ಯಸಭಾ ಸದಸ್ಯರಲ್ಲಿ 24 ಮಹಿಳೆಯರು ಮಾತ್ರ ಇದ್ದಾರೆ. ದೇಶದ ವಿಧಾನಸಭೆಗಳಲ್ಲಿಯೂ ಚಿತ್ರಣ ಇದಕ್ಕಿಂತ ಭಿನ್ನವಾಗಿಲ್ಲ. ನೆಪಕ್ಕೆ ಒಬ್ಬಿಬ್ಬರು ಮಹಿಳೆಯರಿಗೆ ಸಚಿವ ಸ್ಥಾನ ಸಿಗುತ್ತದೆ.

ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಮಹಿಳೆಯರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನ ನಿಗದಿಪಡಿಸಿ ಫಲಕಗಳನ್ನು ಬರೆದಿರುತ್ತಾರೆ. ‘ಬಸ್ಸು ಗಳಲ್ಲಿ ಸ್ಥಳ ನಿಗದಿಪಡಿಸಿ ನಮಗೆ ಕುಳಿತುಕೊಳ್ಳಲು ನೆರವಾಗುವುದು ಬೇಡ, ಇದು ನಮ್ಮನ್ನು ದುರ್ಬಲರ ನ್ನಾಗಿ ಮಾಡುತ್ತದೆ. ನಾವು ಹೋರಾಟ ಮಾಡಿಯೇ ಸ್ಥಳ ಹಿಡಿದುಕೊಳ್ಳುತ್ತೇವೆ’ ಎಂದು ಕೇರಳದಲ್ಲಿ ಕೆಲವು ವರ್ಷಗಳ ಹಿಂದೆ ಮಹಿಳೆಯರು ಪ್ರತಿಭಟನೆ ಮಾಡಿದ್ದರು. ಮಹಿಳಾ ಸಾಹಿತಿಯೊಬ್ಬರು ಮಂಗಳೂರಿನಲ್ಲಿ ಇದೇ ಬಗೆಯ ಹೋರಾಟವನ್ನು ಮಾಡಿ ಪತ್ರಿಕೆಗಳಲ್ಲಿಯೂ ಬರೆದು ಗಮನ ಸೆಳೆದಿದ್ದರು. ಇದಕ್ಕೆ ಎಷ್ಟು ಮಹಿಳೆಯರ ಸಮ್ಮತಿ ಇರುವುದೋ ತಿಳಿಯದು. ಆದರೆ ಹಕ್ಕು ಪಡೆಯುವುದಕ್ಕೆ ಅನುಕಂಪ, ಮೀಸಲಾತಿ ಪರಿಹಾರವಲ್ಲ, ಹೋರಾಟವೇ ಸಮರ್ಪಕ ಮಾರ್ಗ ಎಂಬ ದಿಸೆಯಲ್ಲಿ ಈ ಮಹಿಳೆಯರು ನಡೆಸಿದ ಪ್ರತಿಭಟನೆಯು ಬೆಳಕಿನ ಗೆರೆಯಂತೆ ಕಾಣುತ್ತದೆ.

ಮಹಿಳೆಯರು ಶಿಕ್ಷಣ ರಂಗದಲ್ಲಿ, ಪರಿಶ್ರಮದ ದುಡಿಮೆಯಲ್ಲಿ, ಕುಟುಂಬ ನಿರ್ವಹಣೆಯಲ್ಲಿ ಎಲ್ಲಕ್ಕಿಂತಲೂ ಮಿಗಿಲಾಗಿ ಸಹನೆ ಮತ್ತು ಜಾಣ್ಮೆಯಿಂದ ಬಾಳು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಅವರು ರಾಜಕೀಯವಾಗಿ ಒಂದು ಪ್ರಬಲ ಶಕ್ತಿಯಾಗಿ ಬೆಳೆದುನಿಂತಿಲ್ಲ. ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರದ ವೇದಿಕೆ ಮೇಲೆ ನಿಂತು ಸ್ತ್ರೀ ಸಂಕುಲದ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತುಗಳನ್ನು ಆಡುತ್ತಾರೆ. ಸೂಕ್ಷ್ಮತೆ ಕಳೆದುಕೊಂಡ ಈ ಮಾತುಗಳು ಕೆಲವೊಮ್ಮೆ ಎಲ್ಲೆ ಮೀರಿರುತ್ತವೆ. ಅಂತಹವರಿಗೆ ಮಹಿಳೆಯರು ರಾಜಕೀಯದ ಮೂಲಕವೇ ಉತ್ತರ ಕೊಡುವ ವೇದಿಕೆ ಸೃಷ್ಟಿಯಾಗಬೇಕು.

ರಾಜಕೀಯವು ಪುರುಷಕೇಂದ್ರಿತ ಅಖಾಡ ಎಂದು ನಂಬಿಸಲಾಗಿದೆ. ಈ ನಂಬಿಕೆಯನ್ನು ಮಹಿಳೆಯರು ಹುಸಿಗೊಳಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT