ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧದಲ್ಲಿವಿಶ್ವ ದಾಖಲೆ!

Last Updated 11 ಜುಲೈ 2019, 17:11 IST
ಅಕ್ಷರ ಗಾತ್ರ

ಮುಂಜಾನೆ ವಾಕಿಂಗ್ ಹೋದಾಗ ಬಸ್‍ಸ್ಟ್ಯಾಂಡ್ ಬಳಿ ಚಿಕ್ಕೇಶಿ ಮತ್ತು ಗುಂಡಣ್ಣ ಎದುರಾದರು. ಚಿಕ್ಕೇಶಿ ಹಣೆಗೆ ಬ್ಯಾಂಡೇಜು, ಗುಂಡಣ್ಣ ಕುಂಟುತ್ತಿದ್ದ!

‘ಮೊನ್ನೆ ಊರಿಗೆ ಬೋರ್‍ವೆಲ್ಲು, ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳಲು ಬೆಂಗ್ಳೂರಿಗೆ ಹೋಗ್ತೀವಿ ಅಂದಿದ್ರಿ. ನೋಡಿದ್ರೆ ಹೊಡೆದಾಟಕ್ಕೆ ಹೋಗಿ ಬಂದೋರ ಥರಾ ಕಾಣ್ತಿದೆ’ ಎಂದೆ.

‘ನಾವು ಬೆಂಗ್ಳೂರಿಗೆ ಹೋದಾಗ ನಮ್ಮ ಎಮ್ಮೆಲ್ಲೆ ಯಾವ್ದೋ ರೆಸಾರ್ಟ್‌ನಲ್ಲಿದ್ರು. ಪಕ್ಕದ ಊರಿಗೆ ಕರೆದೊಯ್ದು ಜಾತ್ರೆ ಬಾಡೂಟ ಹಾಕಿಸಿದ್ರು’ ಎಂದ ಚಿಕ್ಕೇಶಿ.

‘ಆಮೇಲೆ?’

‘ಸಂಜೆ ವಿಧಾನಸೌಧಕ್ಕೆ ಹೋದೆವು. ಮೆಟ್ಟಿಲು ಬಳಿ ಜನಜಂಗುಳಿ. ಒಬ್ಬ ಮಂತ್ರಿಗೂ ಎಮ್ಮೆಲ್ಲೆಗೂ ಜಗಳ, ಒಬ್ಬ ಎಮ್ಮೆಲ್ಲೇನ ಕೊರಳಪಟ್ಟಿ ಹಿಡಿದು ಎಳೆದಾಡ್ತಿದ್ರು!’

‘ನಿಮ್ಮ ಎಮ್ಮೆಲ್ಲೆ ಬರಲಿಲ್ವೆ?’

‘ನೀವು ಹೋಗಿರಿ, ಮೀಟಿಂಗ್ ಮುಗಿ
ಸ್ಕೊಂಡು ಬರ್ತೀನೀಂದ್ರು’ ಎಂದ ಗುಂಡಣ್ಣ.

‘ಇದ್ಯಾಕೋ ಬ್ಯಾಂಡೇಜು?’

‘ಎಮ್ಮೆಲ್ಲೇನ ಮೊದಲ ಮಹಡಿಯಿಂದ ಮೂರನೇ ಮಹಡಿಗೆ ತಳ್ಳಿಕೊಂಡು ಹೋದಾಗ ಗುಂಡಣ್ಣ ಮೆಟ್ಟಿಲು ಬಳಿ ಬಿದ್ದ. ಪೊಲೀಸರ ಲಾಠಿ ನನ್ನ ಹಣೆಗೆ ಬಿತ್ತು. ಹೇಗೋ ಪಾರಾಗಿ ರಾತ್ರಿ ಬಸ್ ಹತ್ಕೊಂಡು ಬಂದೆವು’.

‘ಬನ್ನಿ, ಕಾಫಿ ಕುಡಿಯೋಣ’ ಎಂದು ಮನೆಗೆ ಕರೆತಂದೆ. ದಿನಪತ್ರಿಕೆಯಲ್ಲಿ ಕ್ರಿಕೆಟ್ ಸುದ್ದಿ ನೋಡಿ ‘ವರ್ಲ್ಡ್‌ಕಪ್ ಕ್ರಿಕೆಟಲ್ಲಿ ಶಿಖರ್ ಧವನ್‌ನ ರಿಟೈರ್ಡ್ ಹರ್ಟ್ ಆದ ಹಾಗೆ ನೀನು ಬೆಂಗಳೂರಿಂದ ರಿಟರ್ನ್ಡ್‌ ಹರ್ಟ್!’ ಎಂದೆ.

ಮಗ ಕೆಣಕಿದ- ‘ಡ್ಯಾಡೀ, ಬೆಂಗಳೂರಿನ ಘಟನೆಗಳಿಗೂ ಮ್ಯಾಂಚೆಸ್ಟರ್ ಕ್ರಿಕೆಟ್ ಸೆಮಿಫೈನಲ್‍ಗೂ ಏನಾದ್ರೂ ಸಾಮ್ಯತೆ?’

‘ಅಲ್ಲಿ ವಿಕೆಟ್ ಬಿದ್ದಂತೆ ಇಲ್ಲಿ ಕರ್ನಾಟಕದ ಮಾನ ಹೋಯಿತಲ್ಲಾ!’ ಎಂದೆ.

‘ಶಾಸನ ರೂಪಿಸುವ ಶಾಸನ ಭವನದಲ್ಲೇ ಶಾಸಕನ ಮೇಲೆ ದೌರ್ಜನ್ಯ...! ನಮ್ಮ ಮೂವರು ಆರಂಭಿಕ ಬ್ಯಾಟ್ಸ್‌ಮನ್‍ಗಳೂ ಒಂದೊಂದು ರನ್ ಹೊಡೆದದ್ದು; 5 ರನ್ ಗಳಿಸುವಷ್ಟರಲ್ಲಿ ಕ್ಯಾಪ್ಟನ್ ಸಹಿತ ಮೂವರು ಪೆವಿಲಿಯನ್‍ಗೆ ಮರಳಿದ್ದು!’- ಮಗ ಕಣ್ಣುಹೊಡೆದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT