ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕೊರೊನಾ ಕ್ವಾರಲ್

Last Updated 25 ನವೆಂಬರ್ 2020, 19:45 IST
ಅಕ್ಷರ ಗಾತ್ರ

‘ಊಟ ಆಯ್ತೇನಲೇ?’ ಚಂಬಸ್ಯನಿಗೆ ರುದ್ರೇಶಿ ಲೋಕಾರೂಢಿಯಾಗಿ ಪ್ರಶ್ನಿಸಿದ.‌

‘ಆತಪ್ಪ. ಆದ್ರೆ ಮನಿಯಾಗಲ್ಲ, ಹೋಟ್ಲಾಗೆ’ ಚಂಬಸ್ಯ ಅರುಹಿದ.

‘ಹೋಟೆಲ್ ಯಾಕಲೇ? ಮನಿಯಾಗೆ ಅತ್ತಿಗ್ಯಮ್ಮ ಇಲ್ಲೇನು?’

‘ಅಕಿ ಜಗಳಾಡ್‍ಕ್ಯಂದ್ ತವ್ರ್ ಮನಿಗ್ ಹೋಗಿದಾಳೆ’ ಚಂಬಸ್ಯ ಬೇಸರಿಸಿ ನುಡಿದ.

‘ಅಲ್ಲಲೇ ಹಾಫ್‍ಸ್ಯಾಲರಿ, ಜಾಬ್‍ಲಾಸ್ ಅಂತ ಬೆಂಗ್ಳೂರ್‍ನ್ಯಾಗೆ ಕುಟುಂಬ ಕಲಹಗಳು ಆಗ್ತದಾವು. ಇದುಕ್ಕೆ ಕೊರೊನಾ ಕ್ವಾರಲ್ ಅಂತನೇ ಹೆಸ್ರು. ಆದ್ರೆ ಅತ್ತಿಗ್ಯಮ್ಮನೂ ನೀನೂ ಇಲ್ಲಿ ಹಾಯಾಗಿ ಅದೀರ. ನಿಮ್ಮಿಬ್ರು ನಡುವೆ ಈಗ್ಯಾಕಪ್ಪಜ್ಜಿ ಜಗಳ?’

‘ಇಪ್ಪಟ್ಟ್ ನಮ್ಮನಿಯಾಗು ಒಂಥರಾ ಕೊರೊನಾ ಕ್ವಾರಲ್ಲೇ ಆಗೇತಿ ರುದ್ರಿ. ಮ್ಯಾಟ್ರು ಏನಪ್ಪಾಂದ್ರೆ, ಬೆಂಗ್ಳೂರ್‍ನ್ಯಾಗೆ ನನ್ ಹೆಂಡ್ತಿ ತಂಗಿ, ಐ ಮೀನ್ ನನ್ನ ನಾದಿನಿ ಸಂಸಾರ ಮಾಡ್‍ಕ್ಯಂಡದಾಳೆ. ಇಕಿಗ್ ಆರ್ ತಿಂಗ್ಳಿಂದ ಕೆಲಸಿಲ್ಲ. ಗಂಡಗೆ ಹಾಫ್‍ಸ್ಯಾಲರಿ. ಮನಿ ನಡ್ಸಕ್ಕ್ ರೊಕ್ಕಿಲ್ಲ, ನಿಮ್ಮಪ್ಪಂಗ್ಹೇಳಿ ಒಂದೆರಡ್‍ ಲಕ್ಷ ಸಾಲ ಕೊಡ್ಸು ಅಂತ ಆತ ಅಂದದಾನೆ. ನಮ್ಮಪ್ಪನ್ ಕುಟೆ ಸಾಲ ಕೇಳಕ್ಕ್ ನಿಂಗೆ ನಾಚ್ಕಿ ಆಗದುಲ್ವಾ ಅಂತ ಅಕಿ ಬೈದದಾಳೆ. ಕೊನಿಗ್, ನಿಮ್ಮಪ್ಪ ಒಳ್ಳೆವ್ನಲ್ಲ ಅಂತ ಆತ, ನಿಮ್ಮಪ್ಪನೂ ಸರಿಯಿಲ್ಲ ಅಂತ ಅಕಿ– ಇಬ್ರೂ ಜೋರಾಗಿ ಜಗಳಾಡಿದಾರೆ. ಮನ್ನಿ ರಾತ್ರಿ ನಾದಿನಿ ಫೋನ್ ಮಾಡಿ ಗೊಳೋ ಅಂತ ಅಳಕ್ಹತ್ತಿದ್ಲು. ನೀನೇ ಅನುಸರಿಸ್‍ಕ್ಯಂದು ಹೋಗಮ್ಮ, ಸಡ್ಡಕ ಮದ್ಲೇ ಸಿಡುಕ ಅಂತ ನಾದ್ನಿಗೆ ಎರಡ್‍ಮಾತ್ ಬುದ್ಧಿ ಹೇಳ್ದೆ. ಅದೇ ದೊಡ್‍ತಪ್ಪಾತು ನೋಡು! ಬರೇ ನನ್ ತಂಗಿಗೇ ನೀನು ಬುದ್ಧಿ ಹೇಳ್ತಿಯ, ಎಷ್ಟಾದ್ರು ನೀವ್ ಗಂಡುಸ್ರೆಲ್ಲಾ ಯಾವತ್ತಿದ್ರೂ ಒಂದೇ ಅಂತ ನನ್ಹೆಂಡ್ತಿ ಕೋಪ ಮಾಡ್‍ಕ್ಯಂದು ಇದ್‍ಬದ್ ಹಳೆ ವಿಷ್ಯನೆಲ್ಲ ಕೆದಕಿ ರಂಪಾಟ ಮಾಡಿದ್ಳು. ನಂಗೂ ಸಿಟ್‌ ಬಂದು ಒಂದೆರಡ್ ಮಾತ್ ಅಂದೆ. ಅಷ್ಟಕ್ಕೇ ಮಕ ಸಿಂಡರಿಸಿಕ್ಯಂದು ತವ್ರ್‌ ಮನಿಗ್ಹೋಗಿ ಕುಂತದಾಳೆ’.

‘ಒಟ್‌ನ್ಯಾಗೆ, ಬಂಗಾಳಕೊಲ್ಲಿನ್ಯಾಗ್ ಚಂಡಮಾರುತ ಬೀಸಿದ್ದುಕ್ಕೆ ಕರ್ನಾಟಕದಾಗೆ ಪ್ರವಾಹ ಬಂದ್ಹಂಗಾಗೇತಿ ನಿನ್ ಪಾಡು’ ಅಂದ ರುದ್ರೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT